ರಾಳೆಗಣಸಿದ್ದಿ(ಪಿಟಿಐ/ ಐಎಎನ್ಎಸ್): ಲೋಕಪಾಲ ಮಸೂದೆಗೆ ಲೋಕಸಭೆಯಲ್ಲಿ ಬುಧವಾರ ಅಂಗೀಕಾರ ದೊರೆಯುತ್ತಿದ್ದಂತೆ ಮಹಾರಾಷ್ಟ್ರದ ರಾಳೆಗಣಸಿದ್ದಿಯಲ್ಲಿ ಸಂಭ್ರಮಾಚರಣೆ ಮನೆ ಮಾಡಿತು.
ಮಸೂದೆ ಅಂಗೀಕಾರಕ್ಕೆ ಒತ್ತಾಯಿಸಿ 9 ದಿನಗಳಿಂದ ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ನಡೆಸುತ್ತಿದ್ದ ಉಪವಾಸ ಅಂತ್ಯಗೊಳಿಸಿದರು. ಲೋಕಪಾಲ ಜಾರಿಯಾದ ನಂತರ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಮೇಲೆ ಕಣ್ಣಿಡಲು ‘ಕಳಂಕಿತವಲ್ಲದ ಪ್ರಾಮಾಣಿಕ’ ಜನರನ್ನು ಒಳಗೊಂಡ ಕಣ್ಗಾವಲು ಸಮಿತಿ ರಚಿಸುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಇದರಲ್ಲಿ ನಿವೃತ್ತ ನ್ಯಾಯಮೂರ್ತಿಗಳು, ರಾಜ್ಯದ ಪೊಲೀಸ್ ಮುಖ್ಯಸ್ಥರು ಇರುತ್ತಾರೆ.
ಉಪವಾಸ ನಡೆಸುತ್ತಿದ್ದರಿಂದ 76 ವರ್ಷದ ಹಜಾರೆ ಆರೋಗ್ಯದಲ್ಲಿ ಏರುಪೇರಾಗಿದ್ದರೂ ಲೋಕಸಭೆಯಲ್ಲಿ ಲೋಕಪಾಲಕ್ಕೆ ಅಂಗೀಕಾರ ದೊರೆತ ಕೂಡಲೇ ಅವರು ಚೈತನ್ಯದ ಚಿಲುಮೆಯಾದರು. ಅವರ ಮುಖ ದಲ್ಲಿ ಉತ್ಸಾಹ ಚಿಮ್ಮಿತು. ಸಾವಿರಾರು ಅಣ್ಣಾ ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಅಣ್ಣಾ ಅಸಮಾಧಾನ: ಲೋಕಪಾಲ ಮಸೂದೆ ಅಂಗೀಕಾರ ವಾಗಲು ಸಹಕರಿಸಿದ ಎಲ್ಲ ಪಕ್ಷದ ಮುಖಂಡರಿಗೆ ಅಣ್ಣಾ ಕೃತಜ್ಞತೆ ಸಲ್ಲಿಸಿದರು. ಆದರೆ ಲೋಕಪಾಲವನ್ನು ‘ಜೋಕ್ಪಾಲ್’ ಎಂದು ಟೀಕಿಸಿದ್ದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕ್ಯಾಮೆರಾ ಎದುರು ನಿಲ್ಲುವುದಿಲ್ಲ: ವಿಜಯೋತ್ಸವ ಭಾಷಣ ಆರಂಭಿಸುವು ದಕ್ಕಿಂತಲೂ ಮೊದಲು ಅಣ್ಣಾ ಹಜಾರೆ ಕ್ಯಾಮೆರಾ ಮುಂದೆ ನಿಲ್ಲುವ ಕೆಲವು ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೇಜ್ರಿವಾಲ್ ಹಾಗೂ ಅವರ ಬೆಂಬಲಿಗರ ಬಗ್ಗೆ ಕೋಪ ವ್ಯಕ್ತಪಡಿಸಿದರು.
‘ಕ್ಯಾಮೆರಾಕ್ಕೆ ಪೋಸು ನೀಡುವ ನಾಯಕರಿಂದ ದೇಶಕ್ಕೆ ಲಾಭವಿಲ್ಲ. ನಾನು ಹಾಗೆ ಮಾಡಿದ್ದರೆ ಇಲ್ಲಿಯವರೆಗೆ ಬರುತ್ತಿರಲಿಲ್ಲ’ ಎಂದರು.