ನವದೆಹಲಿ (ಪಿಟಿಐ): ಯೋಗಗುರು ಬಾಬಾ ರಾಮದೇವ್ ಹಾಗೂ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಬುಧವಾರ ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಬಂಧಿಸಿ ಇಟ್ಟಿರುವ ತಿಹಾರ್ ಸೆರೆಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರ ಜತೆ ಸೇರಿ ‘ಐಕ್ಯಮತ’ ಪ್ರದರ್ಶಿಸಿದರು.
ಸೆರೆಮನೆಗೆ ಬರುವ ಮುನ್ನ ರಾಮದೇವ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ ಅವರನ್ನು ಭೇಟಿ ಮಾಡಿ ಅಣ್ಣಾ ಹಜಾರೆ ಅವರ ಬಂಧನದ ವಿರುದ್ದ ಮನವಿ ಸಲ್ಲಿಸಿದರು.
ಸೆರೆಮನೆ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಮದೇವ್ ‘ಪ್ರಬಲ ಲೋಕಪಾಲ ಮಸೂದೆಗಾಗಿ ಸಮರ ಸಾರಿರುವ ಅಣ್ಣಾ ಹಜಾರೆ ಅವರ ಬಂಧನ ‘ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಸಿರುವ ಪಿತೂರಿ’ಯಾಗಿದ್ದು, ಅವರ ಕನಸು ನನಸಾಗಲಿ. ಅವರ ಈ ಹೋರಾಟಕ್ಕೆ ಇಡೀ ದೇಶದ ದೇಶಭಕ್ತರೆಲ್ಲರ ಬೆಂಬಲವಿದೆ’ ಎಂದರು.
ಕಾರ್ಯಕರ್ತರಾದ ಕಿರಣ ಬೇಡಿ, ಸ್ವಾಮಿ ಅಗ್ನಿವೇಶ್ ಮತ್ತು ಹೊರಾಟಗಾರ್ತಿ ಮೇಧಾ ಪಾಟ್ಕರ್ ನೇತೃತ್ವದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ನಗರದಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಿದರು.