ನವದೆಹಲಿ (ಐಎಎನ್ಎಸ್): ಪ್ರಬಲ ಲೋಕಪಾಲ ಮಸೂದೆಗೆ ಆಗ್ರಹಿಸಿ ಇದೇ 16ರಿಂದ ಉಪವಾಸ ಸತ್ಯಾಗ್ರಹ ನಡೆಸಲು ಉದ್ದೇಶಿಸಿರುವ ಅಣ್ಣಾ ಹಜಾರೆ ಹಾಗೂ ಅವರ ತಂಡಕ್ಕೆ ದೆಹಲಿ ಪೊಲೀಸರು ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಹೊಂದಿಕೊಂಡಿರುವ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಉದ್ಯಾನವನ್ನು ನಿಗದಿಪಡಿಸಿದ್ದಾರೆ.
ಮೈದಾನವನ್ನು ಪರಿಶೀಲಿಸಿದ ಬಳಿಕವಷ್ಟೇ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಅಣ್ಣಾ ತಂಡ ಇದಕ್ಕೆ ಪ್ರತಿಕ್ರಿಯಿಸಿದೆ.
ಹೋರಾಟ ಬಿಡೆವು: ಲೋಕಪಾಲ ಮಸೂದೆ ವಿಷಯದಲ್ಲಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಅಣ್ಣಾ, ನಾವು ಪ್ರಸ್ತಾಪಿಸಿರುವ ಎಲ್ಲ ಅಂಶಗಳೂ ಈ ಮಸೂದೆ ವ್ಯಾಪ್ತಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
`ಸರ್ಕಾರ ಸಂಸತ್ನಲ್ಲಿ ಮಂಡಿಸಿರುವ ಕರಡು ಮಸೂದೆಯಲ್ಲಿ ಏನೂ ಇಲ್ಲ. ಇದೊಂದು ಕಣ್ಣೊರೆಸುವ ತಂತ್ರ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಮ್ಮ ಬಳಿ ಅಸ್ತ್ರವಿದೆ ಎನ್ನುವುದನ್ನು ಜನರಿಗೆ ತಿಳಿಸುವುದಕ್ಕೆ ಇದೊಂದು ನೆಪವಾಗಿದೆ ಅಷ್ಟೆ~ ಎಂದು ದೂರಿದ್ದಾರೆ.
ಕಾಂಗ್ರೆಸ್ ಸವಾಲು: ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿರುವ ಅಣ್ಣಾ ಮತ್ತು ಅವರ ತಂಡದ ಸದಸ್ಯರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಕಾಂಗ್ರೆಸ್ ಸವಾಲೆಸೆದಿದೆ.
`ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿ ತಮ್ಮ ಅಭಿಪ್ರಾಯಗಳಿಗೆ ಅನುಗುಣವಾಗಿ ಲೋಕಪಾಲ ಮಸೂದೆಯನ್ನು ಅಂಗೀಕರಿಸಲಿ. ಅದನ್ನು ಬಿಟ್ಟು ಉಪವಾಸ ಕುಳಿತುಕೊಳ್ಳುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ~ ಎಂದು ಪಕ್ಷದ ಧುರೀಣ ರಶೀದ್ ಅಲ್ವಿ ಸಲಹೆ ನೀಡಿದ್ದಾರೆ.