ರಾಳೆಗಣಸಿದ್ದಿ (ಪಿಟಿಐ): ಅಣ್ಣಾ ತಂಡ ಮತ್ತು ಆಮ್ ಆದ್ಮಿ ಪಕ್ಷದ ನಡುವಿನ ಭಿನ್ನಾಭಿಪ್ರಾಯ ಸಾರ್ವಜನಿಕವಾಗಿಯೇ ಬಹಿರಂಗವಾಗಿದೆ.
ಅಣ್ಣಾ ಹಜಾರೆ ಉಪವಾಸ ನಡೆಸುತ್ತಿರುವ ಸ್ಥಳದಲ್ಲಿ ಸೇನೆಯ ಮಾಜಿ ಮುಖ್ಯಸ್ಥ ವಿ.ಕೆ. ಸಿಂಗ್ ಜೊತೆಗೆ ವಾಗ್ವಾದಕ್ಕೆ ಇಳಿದ ಆಮ್ ಆದ್ಮಿ
ಪಕ್ಷದ ಮುಖಂಡ ಗೋಪಾಲ್ ರಾಯ್ ಅವರನ್ನು ಸ್ಥಳದಿಂದ ಹೊರ ಹೋಗುವಂತೆ ಹಜಾರೆ ಅವರೇ ಸೂಚಿಸಿದರು.
ವಿ.ಕೆ. ಸಿಂಗ್ ಮಾತನಾಡುತ್ತಾ ‘ವೈಯಕ್ತಿಕ ಲಾಭಕ್ಕಾಗಿ ನಾವು ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ಒಡೆದು ಪ್ರತ್ಯೇಕ ಗುಂಪು ರಚಿಸಿಕೊಳ್ಳಬಾರದು’ ಎಂದು ಹೇಳಿದರು. ಸಿಂಗ್ ಅವರ ಹೇಳಿಕೆಗೆ, ಉಪವಾಸ ಮುಗಿಯುವವರೆಗೆ ರಾಳೆಗಣಸಿದ್ದಿಯಲ್ಲಿ ಇರುವುದಕ್ಕೆ ಆಮ್ ಆದ್ಮಿ ಪಕ್ಷದಿಂದ ನಿಯೋಜಿತರಾಗಿದ್ದ ಗೋಪಾಲ್ ರಾಯ್ ಆಕ್ಷೇಪ ವ್ಯಕ್ತಪಡಿಸಿದರು. ಲೋಕಪಾಲದ ಬಗ್ಗೆ ಮಾತ್ರ ಚರ್ಚಿಸಿ, ಇತರ ವಿಷಯಗಳನ್ನು ಏಕೆ ಎಳೆದು ತರುತ್ತೀರಿ ಎಂದು ಪ್ರಶ್ನಿಸಿದರು.
ಆದರೆ ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಹಜಾರೆ, ಸಿಂಗ್ ಅವರ ಮಾತಿನ ಮಧ್ಯ ಪ್ರವೇಶಿಸದಂತೆ ರಾಯ್ಗೆ ಒರಟಾಗಿ ಹೇಳಿದರು.
ಘಟನೆ ನಂತರ ರಾಯ್ ಅವರನ್ನು ಆಮ್ ಆದ್ಮಿ ಪಕ್ಷ ರಾಳೆಗಣಸಿದ್ದಿಯಿಂದ ಹಿಂದಕ್ಕೆ ಕರೆಸಿಕೊಂಡಿದೆ.