ಗದಗ: ಅವ್ಯವಸ್ಥೆಯ ಆಗರದೊಂದಿಗೆ ಆರಂಭಗೊಂಡ ರಾಜ್ಯ ಪದವಿ ಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಭಾನುವಾರ ತೆರೆ ಬಿತ್ತು.
ನಗರದ ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ರಾಜ್ಯದ 31 ಜಿಲ್ಲೆಗಳಿಂದ 2800 ಸ್ಪರ್ಧಿಗಳು ಭಾಗವಹಿಸಿದ್ದರು. ಬಾಲಕಿಯರ ವಿಭಾಗದ 4್ಡ100 ಮೀ. ರಿಲೆಯಲ್ಲಿ ಮಂಗಳೂರು ತಂಡವು ಪ್ರಥಮ ಸ್ಥಾನ ಪಡೆದರೆ ಬೆಂಗಳೂರು ದಕ್ಷಿಣ ಮತ್ತು ಮೈಸೂರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವುದರೊಂದಿಗೆ ಕ್ರೀಡಾಕೂಟದ ಸ್ಪರ್ಧೆಗಳು ಮುಕ್ತಾಯಗೊಂಡವು. ಹೆಚ್ಚು ಅಂಕಗಳನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಕೂಟದ ಆರಂಭದ ದಿನದಿಂದಲೇ ಹಲವು ಸಮಸ್ಯೆಗಳು ಎದುರಾದವು. ನಿಗದಿಗಿಂತ ಒಂದೂವರೆ ತಾಸು ತಡವಾಗಿ ಕಾರ್ಯಕ್ರಮ ಉದ್ಘಾಟನೆ, ಆಹ್ವಾನ ಪತ್ರಿಕೆಯಲ್ಲಿದ್ದ ಬಹುತೇಕ ಗಣ್ಯರ ಗೈರು ಹಾಜರಿ, ಧ್ವಜಾರೋಹಣದ ವೇಳೆ ಹಗ್ಗ ತುಂಡಾಗಿ ಸಂಘಟಕರ ಮೇಲೆ ಬಿದ್ದ ಕ್ರೀಡಾ ಧ್ವಜ.. ಹೀಗೆ ಹಲವು ಸಮಸ್ಯೆಗಳ ನಡುವೆಯೇ ಕ್ರೀಡಾಕೂಟ ಯಶಸ್ಸಿಗೆ ದೈಹಿಕ ಶಿಕ್ಷಣ ಉಪನ್ಯಾಸಕರು, ಬಿಪಿಇಡಿ ವಿದ್ಯಾರ್ಥಿಗಳು, ಸಂಘಟಕರು ಶ್ರಮಿಸಿದರು.
ಈ ನಡುವೆ ಭಾನುವಾರ ಮೂರು ಸಾವಿರ ಮೀಟರ್ ಓಟದ ಸ್ಪರ್ಧೆಯ ವಿಜೇತರನ್ನು ಅನರ್ಹಗೊಳಿಸಲಾಯಿತು. ರಾಷ್ಟ್ರಮಟ್ಟದಲ್ಲಿ ಮೂರು ಸಾವಿರ ಮೀಟರ್ ಓಟದ ಸ್ಪರ್ಧೆ ಇಲ್ಲ ಎಂಬುದು ಸಂಘಟಕರಿಗೆ ತಡವಾಗಿ ಗೊತ್ತಾದ ಬಳಿಕ ಸ್ಪರ್ಧೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡರು. ವಿಜೇತ ಸ್ಪರ್ಧಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಿಂದ ವೇದಿಕೆ ಬಳಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು.
ಟ್ರಾಕ್ಸೂಟ್ ನೀಡಿಲ್ಲ ಎಂದು ಮೊದಲ ದಿನವೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಆತಿಥೇಯ ಗದಗ ಜಿಲ್ಲೆಯ ಕ್ರೀಡಾಪಟುಗಳು ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿಯೇ ವಿಫಲವಾದರು. ಜಿಲ್ಲೆಗೆ ಒಂದು ಪದಕ ಬಾರದೇ ಕ್ರೀಡಾಪ್ರೇಮಿಗಳಿಗೆ ನಿರಾಸೆ ಉಂಟಾಯಿತು. ಸಂಘಟಕರು ಬಾಲಕ, ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ನೀಡದಿರುವುದಕ್ಕೆ ಸ್ಪರ್ಧಿಗಳು ಅಸಮಾಧಾನಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.