ಕೊಳ್ಳೇಗಾಲ: ಅ.29ರಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಗ್ಗೆ ಮಂಗಳವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾ ರಿಗಳ ಗೈರುಹಾಜರಿಯಿಂದ ಮುಂದೂಡಲಾಯಿತು.
ಮಂಗಳವಾರ ಬೆಳಿಗ್ಗೆ ತಾಲ್ಲೂಕು ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಗ್ಗೆ ಕರೆಯಲಾಗಿದ್ದ ಸಭೆಗೆ ಅಧ್ಯಕ್ಷರಾದ ಸುರೇಶ್ಕುಮಾರ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಗೈರುಹಾಜರಿ ಬಗ್ಗೆ ನಾಯಕ ಮುಖಂಡರು ಕಿಡಿಕಾರಿದರು.
ನಂತರ ಪೂರ್ವಭಾವಿ ಸಭೆಯನ್ನು ಅ.17,18ರಂದು ನಡೆಸುವ ಬಗ್ಗೆ ನಡೆಸಲು ತಹಶೀಲ್ದಾರ್ ದೂರವಾಣಿ ಮೂಲಕ ಸಮಾಜಕಲ್ಯಾಣ ಅಧಿಕಾರಿಗೆ ತಿಳಿಸಿದಾಗ 17,18ರಂದು ಚಾಮರಾಜನಗರ ದಲ್ಲಿ ಗಣೇಶ ಉತ್ಸವ ಇರುವುದರಿಂದ ಬರಲು ಸಾಧ್ಯವಿಲ್ಲ ಎಂದು ವೃತ್ತ ನಿರೀಕ್ಷಕ ರವಿಕುಮಾರ್ ತಿಳಿಸಿದರು.
ಅದೇ ದಿನಾಂಕ ನಡೆಸುವ ಬಗ್ಗೆ ಮುಂದಾಗುವುದನ್ನು ಕಂಡ ವೃತ್ತ ನಿರೀಕ್ಷಕ ತಮ್ಮ ಮಾತಿಗೆ ಬೆಲೆ ಇಲ್ಲವೆಂದ ಮೇಲೆ ನಮ್ಮ ಉಪಸ್ಥಿತಿ ಏಕೆ ಎಂದು ಸಭೆ ಬಹಿಷ್ಕರಿಸಿ ಹೊರನಡೆದರು. ಪಟ್ಟಣ ಠಾಣೆ ಸಬ್ ಇನ್ಸ್ಪೆಕ್ಟರ್ ಸಂದೀಪ್ಕುಮಾರ್ ಸಹ ಅವರನ್ನು ಹಿಂಬಾಲಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೊಪ್ಪಾಳಿ ಮಹದೇವನಾಯಕ, ಚಿಕ್ಕಲಿಂಗಯ್ಯ, ಪರಮೇಶ್, ಸಮಾಜಕಲ್ಯಾಣ ಅಧಿಕಾರಿ ಜಗದೀಶ್ ಇತರರು ಇದ್ದರು.