ಜಾವಗಲ್: ಹೋಬಳಿಯ ಕಲ್ಲಹಳ್ಳಿ ಮುಖ್ಯ ರಸ್ತೆಯಲ್ಲಿ 12 ಪೈಪ್ನ ದೊಡ್ಡ ಸೇತುವೆ ಬಿರುಕು ಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಈ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈಚೆಗೆ ಪ್ರವಾಸಿ ವಾಹನಗಳ ಓಡಾಟ ಹೆಚ್ಚಿದೆ. ಆದ್ದರಿಂದ ಸೇತುವೆ ಶಿಥಿಲಗೊಂಡಿದೆ. ಸೇತುವೆ ಕುಸಿಯುವ ಭಯ ವಾಹನ ಚಾಲಕರಲ್ಲಿ ಉಂಟಾಗಿದೆ. ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಸೇತುವೆ ಮತ್ತು ಹಾಳಾದ ರಸ್ತೆಯ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ.
ದೊಡ್ಡ ಅಪಘಾತ ಸಂಭವಿಸುವ ಮೊದಲು ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಬಿರುಕು ಬಿಟ್ಟ ಸೇತುವೆ ರಿಪೇರಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡುವಂತೆ ಜನತೆ ಒತ್ತಾಯಿಸಿದ್ದಾರೆ.
ಜಾವಗಲ್ ಡಿಗ್ಗೇನಹಳ್ಳಿ ರಸ್ತೆಯ ಸರ್ಕಲ್ ಬಳಿ ದೊಡ್ಡ ಗುಂಡಿ ನಿರ್ಮಾ ಣವಾಗಿದೆ. ಇಲ್ಲಿ 15 ದಿನಗಳಲ್ಲಿ ಎರಡು ಅಪಘಾತ ನಡೆದು ಸಾವು- ನೋವುಗಳು ಸಂಭವಿಸಿವೆ. ಈ ವಿಚಾರದ ಬಗ್ಗೆ ಶಾಸಕರಿಗೂ ತಿಳಿಸಿದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂದು ಜನತೆ ದೂರುತ್ತಾರೆ.
ಕಾಮೇನಹಳ್ಳಿಯಿಂದ ಸಾವಂತನ ಹಳ್ಳಿ-ಕೋಳಗುಂದ ರಸ್ತೆ ವರೆಗೆ ಹೆಜ್ಜೆ ಹೆಜ್ಜೆಗೂ ಗುಂಡಿಗಳು ನಿರ್ಮಾಣ ವಾಗಿವೆ, ಇವುಗಳನ್ನು ಮುಚ್ಚಿಸುವ ಕೆಲಸ ಆಗಿಲ್ಲ. ಈ ರಸ್ತೆಯಲ್ಲಿ ವಾಹನ ಗಳು ಗುಂಡಿ ಇಳಿದು ಮೇಲೆ ಹತ್ತ ಬೇಕು. ರಸ್ತೆ ಎರಡೂ ಕಡೆ ಕಳೆ ಸಸ್ಯ ಬೆಳೆದು ಎದುರು ಬರುವ ವಾಹನಗಳು ಕಾಣಿಸುತ್ತಿಲ್ಲ. ತಿರುವಿನಲ್ಲೇ ಗಿಡಗಳು ಹೆಚ್ಚಾಗಿವೆ.
ಇಂತಹ ಸಂದರ್ಭದಲ್ಲಿ ಮುಂದಿನ ವಾಹನಗಳಿಗೆ ಹಿಂದಿನಿಂದ ಬರುವ ವಾಹನ ಡಿಕ್ಕಿ ಹೊಡೆಯುತ್ತಿವೆ. ಅಪಘಾತ ಸಂಭವಿಸುವ ಮೊದಲೇ ಅಧಿಕಾರಿಗಳು ರಸ್ತೆ, ಸೇತುವೆ ದುರಸ್ತಿಗೆ ಗಮನ ಹರಿಸಬೇಕಿದೆ.