ಕಟಪಾಡಿ: ರಾಜ್ಯದಲ್ಲಿ ಪೊಲೀಸ್, ಸರ್ಕಾರಿ ನಿಯೋಗ, ಸಂಘ ಪರಿವಾರದ ಸಂಘಟನೆಗಳಿಂದ ಚರ್ಚ್, ಪ್ರಾರ್ಥನಾ ಸ್ಥಳಗಳ ಮೇಲೆ ಆಗುತ್ತಿರುವ ದಾಳಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಭಾರತೀಯ ಕ್ರೈಸ್ತ ಒಕ್ಕೂಟ ಬೆಂಗಳೂರಿನಲ್ಲಿ ಇತ್ತೀಚೆಗೆ ಮನವಿ ಸಲ್ಲಿಸಿತು.
ರಾಜ್ಯದಲ್ಲಿ ಹಿಂದುತ್ವ ಜಾರಿ ಮಾಡಲು ಬಿಜೆಪಿ ಸರ್ಕಾರ ತೆರೆಮರೆಯಲ್ಲಿ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ. ಈ ಮೂಲಕ ಕ್ರೈಸ್ತ ಪ್ರಾರ್ಥನಾ ಸ್ಥಳ, ಪಾದ್ರಿ, ಚರ್ಚ್ಗಳ ಮೇಲೆ ನಿರಂತರ ದಾಳಿ ಮಾಡಿಸಲಾಗುತ್ತಿದೆ.
ಇದರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್, ಅಧಿಕಾರಿಗಳಲ್ಲಿ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತಿಲ್ಲ. ಬದಲು ಕ್ರೈಸ್ತರು ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಬೇಕು ಎಂದು ಬೆದರಿಸಿ ಒತ್ತಡ ಹೇರುತ್ತಿದ್ದಾರೆ. ಜತೆಗೆ ಪಾದ್ರಿಗಳಿಗೆ ನೋಟಿಸ್ ಜಾರಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಂವಿಧಾನ ಗಾಳಿಗೆ ತೂರಲಾಗುತ್ತಿದೆ.
ಇತ್ತೀಚೆಗೆ ಸಕಲೇಶಪುರ, ಕಾಡೂರಿನಲ್ಲಿ ಪೊಲೀಸರು ಮತ್ತು ಸಂಘಪರಿವಾರದ ಕಾರ್ಯಕರ್ತರು ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಇವರ ವಿರುದ್ಧ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕ್ರೈಸ್ತ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಚಾಲ್ಸ್ ಆಂಬ್ಲರ್, ಕಾರ್ಯದರ್ಶಿ ಪೀಟರ್ ಡಾಂಟಿ, ಕರ್ನಾಟಕ ಸಂಘ ಸಂಸ್ಥೆಗಳ ಒಕ್ಕೂಟ ರಾಜ್ಯ ಕಾರ್ಯದರ್ಶಿ ಮೈಕಲ್ ಬ್ಯಾಪ್ಟಿಸ್ಟ್, ಸಲಹೆಗಾರ ಡಾ. ರಿತೇಶ್ ಜಾನ್ಸನ್, ಮಂಗಳೂರು ವಿಭಾಗದ ಉಪಾಧ್ಯಕ್ಷ ಸುನೀಲ್ ಮಂಗಳೂರು, ಹಾಸನ ಜಿಲ್ಲಾ ಘಟಕ ಅಧ್ಯಕ್ಷ ಲಿಯೋ ಪ್ರಕಾಶ್, ಸುನಿಲ್ ಡಿಸೋಜ, ಗ್ಲಾಡ್ಸನ್ ಕರ್ಕಡ ಇದ್ದರು.