ಬೆಂಗಳೂರು: ‘ದೇಶದಲ್ಲಿ ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ವರ್ಷಕ್ಕೆ ಒಟ್ಟು ₨22,000 ಕೋಟಿ ಲಂಚ ನೀಡಲಾಗುತ್ತಿದೆ’ ಎಂದು ಕರ್ನಾ ಟಕ ಸರಕು ಸಾಗಣೆದಾರರ ಸಂಘದ ಅಧ್ಯಕ್ಷ ಆರ್.ಎಲ್.ಸಿಂಘಾಲ್ ಗಂಭೀರ ಆರೋಪ ಮಾಡಿದರು. ಭಾನುವಾರ ನಡೆದ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿ, ‘ಹೆದ್ದಾರಿಗಳಲ್ಲಿ, ತಪಾಸಣಾ ಕೇಂದ್ರಗಳಲ್ಲಿ ಮತ್ತು ಲಾರಿ ನಿಲ್ದಾಣಗಳಲ್ಲಿ ಲಂಚ ನೀಡಬೇಕಾಗಿದೆ’ ಎಂದು ದೂರಿದರು.
‘ಸರ್ಕಾರಿ ನೌಕರರಿಗೆ ನೀಡುವಂತೆ ಸರಕು ಸಾರಿಗೆ ಕ್ಷೇತ್ರದ ಕಾರ್ಮಿಕರಿಗೂ ಸರ್ಕಾರ ಸವಲತ್ತುಗಳನ್ನು ನೀಡಬೇಕು’ ಎಂದು ಅವರು ಒತ್ತಾಯಿಸಿದರು.ಉದ್ಯಮಿ ವಿಜಯ ಸಂಕೇಶ್ವರ, ‘ಸರ್ಕಾರಿ ಅಧಿಕಾರಿಗಳಿಗೆ ನೀಡುವ ಲಂಚಕ್ಕಿಂತ ದುಪ್ಪಟ್ಟು ಮೊತ್ತದ ಅವ್ಯವ ಹಾರಗಳು ಸರಕು ಸಾಗಣೆ ಕ್ಷೇತ್ರದಲ್ಲಿ ನಡೆಯುತ್ತಿವೆ. ಸರ್ಕಾರಿ ವ್ಯವಸ್ಥೆಯ ಮೇಲೆ ಗೂಬೆ ಕೂರಿಸುವ ಮೊದಲು ಉದ್ದಿಮೆಯಲ್ಲಿನ ತಪ್ಪುಗಳನ್ನು ನಾವು ತಿದ್ದಿಕೊಳ್ಳಬೇಕು’ ಎಂದರು.
ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ‘ರಾಜ್ಯ ಸರ್ಕಾರವು 13 ರಾಜ್ಯ ಹೆದ್ದಾರಿಗಳಲ್ಲಿ ಸುಂಕ ವಸೂಲಿಗೆ ಸಿದ್ಧತೆ ನಡೆಸಿದ್ದು ಹಗಲು ದರೋಡೆಗೆ ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ₨1500 ಕೋಟಿ ವ್ಯಯ ಮಾಡಲಾಗುತ್ತದೆ.
ಈ ಹೆದ್ದಾರಿಗಳಲ್ಲಿ ಶುಲ್ಕ ಸಂಗ್ರಹದಿಂದ ಪ್ರತಿದಿನ ₨1 ಕೋಟಿಗೂ ಸಂಗ್ರಹ ವಾಗುತ್ತದೆ. ರಸ್ತೆಗೆ ಹೂಡಿದ ಹಣ 10 ವರ್ಷಗಳಲ್ಲೇ ಬರುತ್ತದೆ. ಆದರೆ, ಸರ್ಕಾರವು ಹೆದ್ದಾರಿ ಗುತ್ತಿಗೆದಾರರಿಗೆ 20 ವರ್ಷಗಳಿಗೂ ಹೆಚ್ಚು ಕಾಲ ಸುಂಕ ವಸೂಲಿಗೆ ಅನುಮತಿ ನೀಡಿರುವುದು ಅವೈಜ್ಞಾನಿಕ’ ಎಂದು ಕಿಡಿಕಾರಿದರು.
ಅಖಿಲ ಭಾರತ ಮೋಟಾರು ಸಾಗಣೆದಾರರ ಕಾಂಗ್ರೆಸ್ ಅಧ್ಯಕ್ಷ ಬಾಲ್ ಮಲ್ಕಿತ್ ಸಿಂಗ್, ‘ಹದಗೆಟ್ಟ ರಸ್ತೆ, ಪ್ರತೀ ತಿಂಗಳೂ ಏರಿಕೆಯಾಗುತ್ತಿರುವ ಡೀಸೆಲ್ ಬೆಲೆ ಮತ್ತು ಹೆದ್ದಾರಿ ಸುಂಕದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಿಲ್ಲ. ಸರ್ಕಾರವು ಲಾರಿ ಮಾಲೀಕರಿಗೆ ಅನುಕೂಲವಾಗುವಂತೆ ವಾರ್ಷಿಕ ಸುಂಕ ರಹದಾರಿ ಪದ್ಧತಿಯನ್ನು ಜಾರಿ ಮಾಡಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.