ದೇವನಹಳ್ಳಿ: ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ, ಸಾರ್ವಜನಿಕರಿಗೆ ಮೀಸಲಾದ ಸ್ಥಳಕ್ಕೆ ಖಾಸಗಿಯವರು ಕೈಹಾಕಿದರೆ ಅಂಥವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ ಎಂದು ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ತಹಶೀಲ್ದಾರ್ಗೆ ತಾಕೀತು ಮಾಡಿದರು.
ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸಾರ್ವಜನಿಕರು ನೀಡಿರುವ ದೂರುಗಳಿಗೆ ಸಂಬಂಧಿ ಸಿದಂತೆ ಭಾನುವಾರ ನಡೆದ ವಿವಿಧ ಅಧಿಕಾರಿಗಳ ಜನಸಂಪರ್ಕ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ವಿ.ಶಶಿಧರ್ ಎಂಬುವರು ಸಲ್ಲಿಸಿರು ದೂರಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮ್ಯಾಕ್ಸ್ವರ್ತ್ ರಿಯಾಲಿಟಿ ಖಾಸಗಿ ಕಂಪೆನಿ 9.10 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. 9–10 ನಮೂನೆ ಸಲ್ಲಿಸಿ ಅಕ್ರಮ ಲೇ ಔಟ್ ಮಾಡಲಾಗುತ್ತಿದೆ, ಇದಕ್ಕೆ ಬಯಪಾ ಅನುಮತಿ ಇಲ್ಲ ಮತ್ತು ಗ್ರಾ.ಪಂ ಪತ್ರ ಬರೆದು ನೋಂದಣಿ ಇಲಾಖೆಗೂ ತಿಳಿಸಲಾಗಿದೆ. ಆದರೂ ನಿಯಮ ಮೀರಿ ನೋಂದಣಿ ಮಾಡಲಾಗಿದೆ ಎಂದು ದೂರು ದಾರರು ಹೇಳಿದ್ದಾರೆ.
ಇದನ್ನೆಲ್ಲಾ ನೋಡಿದರೆ ನಿವೇನಾದರು ಶಾಮೀಲಾಗಿದ್ದರಾ ಎಂಬ ಅನುಮಾನ ಮೂಡುತ್ತದೆ ಎಂದ ಅವರು ನೋಂದಣಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸೂಕ್ತ ದಾಖಲಾತಿ ಇಲ್ಲದಿದ್ದರೆ ಇಡಿ ದೇಶವನ್ನೆ ಮಾರುತ್ತೀರಿ ಎಂದು ಅವರು ಕಿಡಿ ಕಾರಿದರು.
ವೆಂಕಟಗಿರಿಕೋಟೆ ಗ್ರಾಮದಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಡಿ.ಓ ಮತ್ತು ಕಾರ್ಯದರ್ಶಿಗಳಿಗೆ ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು 703 ರ ಪ್ರಕರಣದಲ್ಲಿ ಹಾಲಿ ಇರುವ ಅರ್ಹರನ್ನು ಬಿಟ್ಟು ಬೇರೊಬ್ಬರಿಗೆ ನಿವೇಶನ ಖಾತೆ ಮಾಡಿಕೊಡಲು ನಿಮಗೆ ಯಾವ ಅಧಿಕಾರವಿದೆ? ಪಂಚಾಯಿತಿ ಕಚೇರಿಗೆ ಬರುವವರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ರೌಡಿಸಂ ಮಾಡುವುದು ಅಧಿಕಾರಿಗಳ ಕೆಲಸವಲ್ಲ. ಸಾರ್ವಜನಿಕರಿಗೆ ಉತ್ತಮ ಸೇವೆ ಮಾಡಲು ಇಚ್ಛೆ ಇದ್ದರೆ ಮಾಡಿ ಇಲ್ಲವೆಂದರೆ ಮನೆಗೆ ಹೋಗಿ ಎಂದು ಆಕ್ರೋಶದಿಂದ ನುಡಿದರು.
ರಾಮನಾಥಪುರ ಲಕ್ಷ್ಮಣ ತಮ್ಮ ದೂರಿನ ಬಗ್ಗೆ ಮಾತನಾಡಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಆರ್.ಎನ್.ಕೃಷ್ಣಮೂರ್ತಿ ಎಂಬುವರು ರಬ್ಬನಹಳ್ಳಿ ಸ. ನಂ53ರಲ್ಲಿ ಕೆರೆಯಂಗಳದಲ್ಲಿ ಸರ್ಕಾರಿ ಬಗರ್ಹುಕುಂ 9.30 ಎಕರೆಯಲ್ಲಿ ಅಕ್ರಮ ಮನೆ ಮತ್ತ ತೋಟ ನಿರ್ಮಿಸಿಕೊಂಡಿದ್ದಾರೆ.
ಇದರ ಬಗ್ಗೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಒತ್ತುವರಿ ತೆರವಾಗಿಲ್ಲ. ಇವರು ಪ್ರಭಾವಿ ರಾಜಕಾರಣಿಯಾಗಿದ್ದು ಲೋಕಾ ಯುಕ್ತರಿಗೆ ದೂರು ನೀಡಿದ ನಂತರ ನನಗೆ ಜೀವ ಬೆದರಿಕೆ ಕರೆ ಬರುತ್ತಿವೆ. ಆದ್ದರಿಂದ ನನಗೆ ರಕ್ಷಣೆ ಬೇಕು’ ಎಂದು ಮನವಿ ಮಾಡಿದರು.
ನಂತರ ಜಿಲ್ಲಾಧಿಕಾರಿ ಸಮಜಾಯಿಷಿ ನೀಡಿ, ಶೀಘ್ರದಲ್ಲಿಯೇ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು ಜಿಲ್ಲಾ
ನಿರ್ಮಿತಿ ಕೇಂದ್ರಕ್ಕೂ ಪತ್ರ ಬರೆದು ತಡೆಗೋಡೆ ನಿರ್ಮಿಸುವಂತೆ ಸೂಚಿಸಲಾಗಿದೆ ಎಂದರು.
ಈ ದೂರಿಗೆ ಸಂಬಂಧಿಸಿದಂತೆ ಉಪಲೋಕಾಯುಕ್ತರು ಮಾತನಾಡಿ, ನಾಲ್ಕು ವಾರದಲ್ಲಿ ವಿಚಾರಣೆ
ನಡೆಸಿ ಏನು ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ನನಗೆ ತಿಳಿಸಬೇಕು. ದೂರುದಾರರಿಗೆ ತಕ್ಷಣವೇ
ರಕ್ಷಣೆಗೆ ಪೊಲೀಸರನ್ನುಒದಗಿಸಬೇಕು ಎಂದು ಅವರು ಸೂಚಿಸಿದರು. ದೊಡ್ಡೆಗೌಡ ಎಂಬುವರು
ತಮ್ಮ ಪ್ರಕರಣದ ಬಗ್ಗೆ ಮಾತನಾಡಿ, ವಿಜಯಪುರದಿಂದಬೂದಿಗೆರೆ ಜಿಲ್ಲಾ ಹೆದ್ದಾರಿ25 ಕಿ.ಮೀ ರಸ್ತೆಗೆ ಲೋಕೋಪ
ಯೋಗಿ ಇಲಾಖೆ ವತಿಯಿಂದ 26 ಕೋಟಿ ರೂ ವೆಚ್ಚ ಮಾಡಲಾಗಿದೆ. ಇದರ ಕಾಮಗಾರಿ ಕಳಪೆ ಗುಣಮಟ್ಟವಾಗಿದೆ. ಕಾಮಗಾರಿ ಪೂರ್ಣಗೊಂಡಿದೆ ಎಂದು 24ಕೋಟಿ ಹಣ ಗುತ್ತಿಗೆದಾರರಿಗೆ ಸೇರಿದೆ. ರಸ್ತೆ ಮಾತ್ರ ಗುಂಡಿ ಹೊಂಡದ ಸ್ಥಿತಿಯಲ್ಲೇ ಇದೆ ಎಂದು ಅವರು ಹೇಳಿದರು.
ದೂರು ಆಲಿಸಿ ಮಾತನಾಡಿದ ಉಪ ಲೋಕಾಯುಕ್ತರು, ಅಪೂರ್ಣ ಕಾಮಗಾರಿ ಕಳಪೆ ಇದ್ದರೂ ಬಿಲ್ಲು ನೀಡಿದ್ದೀರಿ, ಶೇ.60 ಮಾತ್ರ ನೀಡಿ ಉಳಿಕೆ ಹಣ ಪರಿಪೂರ್ಣ ವಾಗುವವರಿಗೂ ನೀಡಬಾರದಿತ್ತು. ನಿವೇನಾದರೂ ಶಾಮೀಲಾಗಿದ್ದಿರಾ ಎಂದು ಪ್ರಶ್ನಿಸಿ ಈ ಪ್ರಕರಣಕ್ಕೆ
ಖುದ್ದು ಪರಿಶೀಲಿಸಿ ರಸ್ತೆ ಗುಣಮಟ್ಟದ ಅಂಶಗಳನ್ನು ಅರಿತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.