ಬೆಂಗಳೂರು: ಇದೇ 24ರಿಂದ ಆರಂಭವಾಗುವ ವಿಧಾನ ಮಂಡಲದ ಅಧಿವೇಶನ ಮಾರ್ಚ್ 17ರವರೆಗೆ ನಡೆಯಲಿದ್ದು, ಅಂತರ್ಜಲ ಸಂರಕ್ಷಣೆ, ಪಂಚಾಯತ್ರಾಜ್ ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟು ಏಳು ಮಸೂದೆಗಳು ಮಂಡನೆಯಾಗಲಿವೆ ಎಂದು ವಿಧಾನ ಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
24ರಂದು ಬಜೆಟ್ ಮಂಡನೆ ನಂತರ ಯಾವುದೇ ಕಲಾಪ ಇರುವುದಿಲ್ಲ. 25ರಂದು ಸಂತಾಪ ಸೂಚನೆ ನಂತರ ಸರ್ಕಾರಿ ಕಲಾಪಗಳು ನಡೆಯಲಿವೆ. ಒಟ್ಟು 15 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಸದನವನ್ನು ಸುಗಮವಾಗಿ ನಡೆಸುವ ದೃಷ್ಟಿಯಿಂದ 25ರಂದು ಸರ್ವಪಕ್ಷಗಳ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ಕರ್ನಾಟಕ ಪಂಚಾಯತ್ರಾಜ್ (ತಿದ್ದುಪಡಿ) ಮಸೂದೆ, ಪರಿಶಿಷ್ಟಜಾತಿ/ಪಂಗಡ ಮತ್ತು ಹಿಂದುಳಿದ ವರ್ಗಗಳ (ನೇಮಕಾತಿ ಮೊದಲಾದ ವಿಷಯಗಳಲ್ಲಿ ಮೀಸಲಾತಿ) ಮಸೂದೆ, ಭೂ ಸ್ವಾಧೀನ ತಿದ್ದುಪಡಿ ಮಸೂದೆ, ಕರ್ನಾಟಕ ಪ್ರಾದೇಶಿಕ ಕಾನೂನುಗಳ ನಿರಸನಗೊಳಿಸುವ ಮಸೂದೆ. ಅಂತರ್ಜಲ (ಅಭಿವೃದ್ಧಿ ಹಾಗೂ ನಿಯಂತ್ರಣ) ಮಸೂದೆ ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಮಸೂದೆಗಳು ಮಂಡನೆಯಾಗಲಿವೆ ಎಂದರು.