ಬೆಂಗಳೂರು: ಸಮ್ಮೇಳನಾಧ್ಯಕ್ಷರಿಗೆ ಗೌರವ ಸಂಭಾವನೆಯಾಗಿ ನಗದು ನೀಡುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಮಂಗಳವಾರ ಇಲ್ಲಿ ತಿಳಿಸಿದರು.
ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್ ಕ್ಲಬ್ ಜಂಟಿಯಾಗಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಪ್ರಶ್ನೆಗೆ ಉತ್ತರಿಸಿದರು.
‘ಸಮ್ಮೇಳನಾಧ್ಯಕ್ಷತೆ ವಹಿಸುವ ಸಾಹಿತಿಗಳಿಗೆ ಏನಾದರೂ ಉಡುಗೊರೆ ಕೊಡಬೇಕೆಂಬುದಕ್ಕೆ ನನ್ನ ಸಹಮತ ಇದೆ. ಆ ಬಗ್ಗೆ ಚಿಂತನ ಮಂಥನ ನಡೆ ದಿದೆ. ಆದರೆ ಹಣ ಕೊಡುವ ಪದ್ಧತಿ ಒಳ್ಳೆಯದಲ್ಲ. ಅದು ಪರಂಪರೆಯಾಗಬಾರದು’ ಎಂದು ಅವರು ಹೇಳಿದರು.
‘75ನೇ ಸಮ್ಮೇಳನಾಧ್ಯಕ್ಷರಿಗೆ ರೂ 75 ಸಾವಿರ ಹಣ ಕೊಡಲಾಗಿತ್ತು. 76ನೇ ಸಮ್ಮೇಳನಾಧ್ಯಕ್ಷರಿಗೆ ರೂ 76 ಸಾವಿರ ನೀಡಬಹುದು ಎಂದು ನಾನು ಸಲಹೆ ನೀಡಿದ್ದೆ. ಆದರೆ ವೇದಿಕೆಯಲ್ಲಿ ನೇರ ವಾಗಿ ಸಮ್ಮೇಳನಾಧ್ಯಕ್ಷರಿಗೆ ರೂ 11 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚೆಕ್ ನೀಡಿದ್ದು ನನಗೆ ಆಶ್ಚರ್ಯ ಉಂಟು ಮಾಡಿತ್ತು’ ಎಂದು ಅವರು ನುಡಿದರು.
‘ಇಷ್ಟೊಂದು ಹಣ ಸಿಗುವುದಾಗಿದ್ದರೆ ಪರಿಷತ್ತಿನ ಅಧ್ಯಕ್ಷನಾಗುವ ಬದಲು ಸಮ್ಮೇಳನಾಧ್ಯಕ್ಷನಾಗಲು ಪ್ರಯತ್ನಿಸುತ್ತಿದ್ದೆ ಎಂದು ನಾನು ಅದೇ ಸಮ್ಮೇಳನದಲ್ಲಿ ಹೇಳಿದ್ದೆ. ಆ ಹಣ ಸಚಿವ ಶ್ರೀರಾಮುಲು ಅವರದ್ದೆಂದು ಸುದ್ದಿಯಾಗಿತ್ತು. ಲೆಕ್ಕಾಚಾರ ನೋಡಿದರೆ ಆ ಹಣ ಪರಿಷತ್ತಿನದೇ ಆಗಿತ್ತು’ ಎಂದು ಹೇಳಿದರು.