ಚಿಕ್ಕಬಳ್ಳಾಪುರ: `ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ತೋರುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸಬೇಕು. ಉತ್ತಮ ಶಿಕ್ಷಣದ ನಿರೀಕ್ಷೆಯಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಪೋಷಕರನ್ನು ನಿರಾಸೆಗೊಳಿಸಬಾರದು~ ಎಂದು ಡಿಸಿ ಡಾ.ಎನ್.ಮಂಜುಳಾ ತಿಳಿಸಿದರು.
ತಾಲ್ಲೂಕಿನ ಮಾರಗಾನಹಳ್ಳಿಯಲ್ಲಿ ಈಚೆಗೆ ಆಯೋಜಿಸಲಾಗಿದ್ದ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ `ಸಮುದಾಯ ಬಾಳ್ವೆ ಶಿಬಿರ~ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, `ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ನಾಗರಿಕನ್ನಾಗಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ~ ಎಂದರು.
`ಮಕ್ಕಳಿಗೆ ಅಗತ್ಯ ಮತ್ತು ಅತ್ಯುತ್ತಮ ಶಿಕ್ಷಣ ನೀಡಬೇಕಿದ್ದರೆ, ಶಿಕ್ಷಕರು ಅಧ್ಯಯನಶೀಲರಾಗಿರಬೇಕು. ಜ್ಞಾನ-ವಿಜ್ಞಾನ ವಿಷಯಗಳಲ್ಲಿ ಮಾತ್ರವಲ್ಲದೇ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬೇಕು.
ಪಠ್ಯಕ್ರಮದಲ್ಲಿರುವ ಪಾಠಗಳಲ್ಲದೇ ಪ್ರಚಲಿತ ವಿದ್ಯಮಾನಗಳನ್ನು ಸಹ ಮಕ್ಕಳೊಂದಿಗೆ ಚರ್ಚಿಸಬೇಕು~ ಎಂದರು.
`ವಿದ್ಯಾರ್ಥಿಯೊಬ್ಬ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಿದ್ದರೆ, ಸಕಲ ವಿಷಯಗಳ ಬಗ್ಗೆಯೂ ಜ್ಞಾನವಿರಬೇಕು. ಸಾಮಾನ್ಯ ಜ್ಞಾನ, ಸಮಾಜದ ಸ್ಥಿತಿ ಅರಿವಿರಬೇಕು~ ಎಂದು ಹೇಳಿದರು.
ಶಾಸಕ ಕೆ.ಪಿ.ಬಚ್ಚೇಗೌಡ, `ಎಂಜಿನಿಯರ್ ಕಟ್ಟಡಗಳನ್ನು ಕಟ್ಟಿದರೆ, ವೈದ್ಯರು ಜನರ ಪ್ರಾಣ ಉಳಿಸುತ್ತಾರೆ. ಇವರಷ್ಟೇ ಪ್ರಮುಖ ಪಾತ್ರ ವಹಿಸುವ ಶಿಕ್ಷಕರು ವಿದ್ಯಾರ್ಥಿಗಳ ಮೂಲಕ ದೇಶ ಕಟ್ಟುತ್ತಾರೆ. ವಿದ್ಯಾರ್ಥಿಗಳಲ್ಲಿ ಸಮಾಜಪರ ಕಾಳಜಿ ಮತ್ತು ದೇಶಾಭಿಮಾನ ಮೂಡಿಸಬೇಕು~ ಎಂದರು.
ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಕೋಡಿರಂಗಪ್ಪ ಮಾತನಾಡಿದರು.
ಕೆ.ವಿ.ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಕೆ.ಆರ್.ನಾಗಭೂಷಣ್, ಚನ್ನಕೇಶವ ಕಲ್ಯಾಣ ಮಂಟಪದ ಅಧ್ಯಕ್ಷ ರಾಜಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.