ನವದೆಹಲಿ (ಐಎಎನ್ಎಸ್): ಕೇರಳದ ಅನಂತಪದ್ಮನಾಭ ದೇವಸ್ಥಾನದ ನೆಲಮಾಳಿಗೆಯ `ಬಿ~ ಕೋಣೆಯನ್ನು ಸದ್ಯಕ್ಕೆ ತೆರೆಯದಿರುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಈಗಾಗಲೇ ಇತರ ಕೋಣೆಗಳಿಂದ ವಶ ಪಡಿಸಿಕೊಂಡಿರುವ ಆಭರಣಗಳ ರಕ್ಷಣೆ ಹಾಗೂ ಸಂರಕ್ಷಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಂಡ ನಂತರ `ಬಿ~ ಕೋಣೆ ತೆರೆಯಬೇಕೇ ಬೇಡವೆ ಎನ್ನುವ ಕುರಿತು ಪರಿಶೀಲಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಆರ್.ವಿ.ರವೀಂದ್ರನ್ ಮತ್ತು ಎ.ಕೆ.ಪಟ್ನಾಯಕ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.
ದೇವಸ್ಥಾನದ ಇತರ ಕೋಣೆಗಳಿಂದ ಈಗಾಗಲೇ ಶೋಧಿಸಿರುವ ಆಭರಣಗಳ ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿ ಮಾಡಿದ ಶಿಫಾರಸುಗಳನ್ನು ಕುರಿತು ಪೀಠ ಆದೇಶವನ್ನು ಕಾಯ್ದಿರಿಸಿತು.
ಮುಂದಿನ ಆದೇಶವನ್ನು ಬುಧವಾರ ಪ್ರಕಟಿಸಲಾಗುವುದು ಎಂದು ಹೇಳಿದ ರವೀಂದ್ರನ್, ದೇವಸ್ಥಾನದ ಸಂಪ್ರದಾಯ ಮತ್ತು ಭಕ್ತರ ನಂಬಿಕೆಯನ್ನು ಮಾನ್ಯ ಮಾಡಲಾಗುವುದು ಎಂದೂ ಹೇಳಿದರು.
ದೇವಸ್ಥಾನದ ಸಂಪ್ರದಾಯ, ಭಕ್ತರ ನಂಬಿಕೆ ಹಾಗೂ ದೇವಸ್ಥಾನದ ಖಜಾನೆ ಭದ್ರತೆ ಕುರಿತಂತೆ ಒಮ್ಮತಾಭಿಪ್ರಾಯಕ್ಕೆ ಸದ್ಯದ ಪರಿಸ್ಥಿತಿ ಧಕ್ಕೆ ಉಂಟು ಮಾಡಿದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.