ಧಾರವಾಡ: ನಗರದ ವಿವೇಕಾನಂದ ವೃತ್ತದಿಂದ ಗಾಂಧಿ ವೃತ್ತದವರೆಗೆ ಇರುವ ಪಾದಚಾರಿ ಮಾರ್ಗದ ಮೇಲೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಯಾಗುವ ರೀತಿಯಲ್ಲಿ ಇದ್ದ ಚಿಕ್ಕ, ಪುಟ್ಟ ಅಂಗಡಿಗಳನ್ನು ಸೋಮವಾರ ಪೊಲೀಸರು ಸ್ಥಳಾಂತರಿಸಿದರು.
ವಿವೇಕಾನಂದ ವೃತ್ತದ ಹತ್ತಿರ ಇರುವ ಪಾದಚಾರಿ ಮಾರ್ಗದ ಮೇಲೆ ಹಲವಾರು ಅಂಗಡಿಗಳು ಇದ್ದು, ಇದರಿಂದ ಫುಟಪಾತ್ ಮೇಲೆ ನಡೆದಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಇಲ್ಲಿ ಅಂಗಡಿಗಳನ್ನು ನಿರ್ಮಿಸಿ ವ್ಯಾಪಾರ ಮಾಡುವುದರಿಂದ ಜನದಟ್ಟನೆ ಉಂಟಾಗಿ, ಸಾಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದೆ ಎಂಬ ಉದ್ದೇಶದಿಂದ ಈ ಅಂಗಡಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಅನುಮತಿ ಇಲ್ಲದೇ ವ್ಯಾಪಾರ ಮಾಡುತ್ತಿರುವ ಅಂಗಡಿಗಳನ್ನು ಸ್ಥಳಾಂತರಿಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ಕೂಡ ಆದೇಶಿಸಿದೆ. ಆದ್ದರಿಂದ ಸ್ಥಳಾಂತರ ಕಾರ್ಯಾಚರಣೆ ಕೈಗೊಂಡಿದ್ದು, ಪಾದಚಾರಿ ಮಾರ್ಗ ಬಿಟ್ಟು ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ವಿವೇಕಾನಂದ ವೃತ್ತದಿಂದ ಗಾಂಧಿ ವೃತ್ತದವರೆಗೆ ಇದ್ದ ಸುಮಾರು 50 ರಿಂದ 60 ಅಂಗಡಿಗಳನ್ನು ಸೋಮವಾರ ಸ್ಥಳಾಂತರಿಸಲಾಗಿದೆ ಎಂದು ಸಂಚಾರ ಠಾಣೆಯ ಇನ್ಸ್ಪೆಕ್ಟರ್ ವಿಜಯಕುಮಾರ ತಳವಾರ `ಪ್ರಜಾವಾಣಿ'ಗೆ ತಿಳಿಸಿದರು.
ಶಹರ ಠಾಣೆಯ ಸಿಪಿಐ ತುಳಜಪ್ಪ ಸುಲ್ಫಿ, ಪಾಲಿಕೆ ವಲಯ ಕಂದಾಯ ಅಧಿಕಾರಿ ಕಟ್ಟೀಮನಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.