ಕೋಲಾರ: ರೂಪಾಯಿ ಮೌಲ್ಯದ ಔಷಧಿಗಳು ಬಳಕೆಯಾಗದೆ ಅವಧಿ ಮುಗಿದು ಸರ್ಕಾರಕ್ಕೆ ನಷ್ಟವಾಗಿರುವುದಿಂದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘ-ಹಸಿರು ಸೇನೆ ಕಾರ್ಯಕರ್ತರು ನಗರದ ಪಶುವೈದ್ಯ ಆಸ್ಪತ್ರೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪಶುಗಳಿಗೆ ವಿತರಿಸಬೇಕಾಗಿರುವ ಔಷಧಿಯನ್ನು ದಾಸ್ತಾನು ಮಾಡಿ ರೈತರಿಗೆ ಔಷಧಿಗಳು ಖಾಲಿಯಾಗಿವೆ ಎಂದು ಅಧಿಕಾರಿಗಳು ಸುಳ್ಳು ಹೇಳಿದ್ದಾರೆ. ರೈತರನ್ನು ಖಾಸಗಿ ಔಷಧಿ ಅಂಗಡಿಗಳಿಗೆ ಕಳುಹಿಸಿ ಅಲ್ಲಿಂದ ಔಷಧಿಗಳನ್ನು ತರಿಸಿ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಇಲಾಖೆಯ ಔಷಧಿಗಳ ಬಳಕೆ ಅವಧಿ ಮುಗಿದು ಉಪಯೋಗಕ್ಕೆ ಬಾರದಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿವರ್ಷವೂ ಇಲಾಖೆಗೆ ಔಷಧಿಗಳನ್ನು ಸರ್ಕಾರ ಪೂರೈಸುತ್ತಿದೆ. ಆದರೆ ವ್ಯಾಪಾರಿಗಳು ನೀಡುವ ಕಮೀಷನ್ ಆಸೆಗಾಗಿ ಅಧಿಕಾರಿಗಳು ಕರ್ತವ್ಯ ಲೋಪವೆಸಗಿ ರೈತರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಔಷಧಿಗಳು ಲಭ್ಯವಿಲ್ಲ ಎಂದು ಖಾರವಾಗಿ ಹೇಳುತ್ತಾರೆ. ಈ ಮುಂಚೆ ಇಲ್ಲಿನ ಅಧಿಕಾರಿಯಾಗಿದ್ದವರಿಂದ ಮೂರುಪಟ್ಟು ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ಸ್ಪಷ್ಟನೆ: ಪಶುಪಾಲನೆ ಇಲಾಖೆ ಉಪನಿರ್ದೇಶಕ ಶ್ರೀರಾಮರೆಡ್ಡಿ ಸ್ಪಷ್ಟನೆ ನೀಡಿ, ಘಟನೆ ತಮ್ಮ ಗಮನಕ್ಕೆ ಬಂದಿದ್ದು, ಕೂಡಲೇ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಖಂಡರಾದ ಅಬ್ಬಣಿ ಶಿವಪ್ಪ, ಗಣೇಶಗೌಡ, ವೆಂಕಟೇಶಗೌಡ, ಜಿ.ಮಂಜುನಾಥ್, ಜಿ.ನಾರಾಯಣಸ್ವಾಮಿ, ಬೈಚೇಗೌಡ, ಸಿ.ವಿ.ಪ್ರಭಾಕರ್, ಸೀನಪ್ಪ, ಅಶ್ವತ್ಥರೆಡ್ಡಿ, ಮಂಜುನಾಥ್, ಚಂದ್ರಪ್ಪ, ಚನ್ನಕೇಶವಗೌಡ, ಬಿ.ರಾಜು, ರಮೇಶ್, ರವಿ, ಮಂಜುನಾಥ್, ಕೃಷ್ಣಪ್ಪ, ನಾರಾಯಣಸ್ವಾಮಿ, ಡಿ.ಕೃಷ್ಣಪ್ಪ, ಪಟ್ನ ಬಾಬು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.