ಅಬುಧಾಬಿ: ಅಬುಧಾಬಿಯಲ್ಲಿ ಎಲ್ಲ ವ್ಯವಹಾರಗಳು ಪಾರದರ್ಶಕತ್ವದಿಂದ ಮುಕ್ತವಾಗಿ ನಡೆಯುತ್ತವೆ. ಈ ದೇಶದ ರಾಜರು ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರ ಉತ್ತೇಜನ ನಮಗೆ ಪ್ರೋತ್ಸಾಹ ನೀಡಿದೆ. ಕನ್ನಡಾಂಬೆಯನ್ನು ವಿಶ್ವಕ್ಕೆ ಪರಿಚಯಿಸುವುದಕ್ಕೆ ಈ ಸಮ್ಮೇಳನ ಸಹಕಾರಿ ಎಂದು ಸಮಾರಂಭದ ಅಧ್ಯಕ್ಷ ಉದ್ಯಮಿ ಬಿ.ಆರ್. ಶೆಟ್ಟಿ ನುಡಿದರು.
ಅಬುಧಾಬಿ ಕರ್ನಾಟಕ ಸಂಘ ಮತ್ತು ಮಂಗಳೂರಿನ `ಹೃದಯವಾಹಿನಿ ಮಾಸಿಕ' ಇವುಗಳ ಪ್ರಾಯೋಜಕತ್ವದೊಂದಿಗೆ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ 9ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ-2012 ಇಲ್ಲಿನ ಇಂಡಿಯನ್ ಸ್ಕೂಲ್ನ ಶೇಖ್ ಜಾಯೇದ್ ಸಭಾಗೃಹದ `ಕವಿ ಮುದ್ದಣ ವೇದಿಕೆ'ಯಲ್ಲಿ ನಡೆಯಿತು. ಅವರು ಇದರಲ್ಲಿ ಭಾಗವಹಿಸಿ ಮಾತನಾಡಿದರು.
ಖ್ಯಾತ ಸಾಹಿತಿ ಮಲ್ಲೇಪುರಂ ಜಿ.ವೆಂಕಟೇಶ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡು ದಿನಗಳ 9ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಯುಎಇಯ ಭಾರತ ರಾಯಭಾರಿ ಎಂ.ಕೆ ಲೋಕೇಶ್ ಉದ್ಘಾಟಿಸಿದರು.ಕರ್ನಾಟಕದ ಸಂಸ್ಕೃತಿ, ಭಾಷೆಯ ಮಹತ್ವವನ್ನು ವಿವರಿಸಿ ಕನ್ನಡಿಗರ ಮಾನವೀಯ ಸಹೃದಯಿತನ ಎಲ್ಲರಿಗೂ ಮಾದರಿ ಆಗಲಿ ಎಂದು ಲೋಕೇಶ್ ಆಶಿಸಿದರು.
ಅತಿಥಿಗಳಾಗಿ ಉದ್ಯಮಿಗಳಾದ ಪ್ರದೀಪ್ ಕುಮಾರ್, ಯುಎಇ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧೀರ್ ಶೆಟ್ಟಿ, `ಅರಬ್ ಉಡುಪಿ ರೆಸ್ಟೋರೆಂಟ್ಸ್' ಸಂಸ್ಥೆಯ ಆಡಳಿತ ನಿರ್ದೇಶಕ ಶೇಖರ್ ಬಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಕರ್ನಾಟಕ ಭಾರತದಿಂದ ಬೇರೆಯಲ್ಲ. ಇದು ಏಕತೆಯನ್ನು ತೋರುವ ಭವ್ಯ ಇತಿಹಾಸವುಳ್ಳ ರಾಜ್ಯವಾಗಿದೆ. ಇಂತಹ ಮಹಾನ್ ರಾಜ್ಯದ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಮ್ಮ ಸಂಘ ಅಳಿಲ ಸೇವೆ ಸಲ್ಲಿಸುತ್ತಿದೆ ಎಂದರು. ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸಂಸ್ಥಾಪಕ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ಅವರು ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಅನಿವಾಸಿ ಕನ್ನಡಿಗರಲ್ಲಿ ಮತ್ತು ಹೊಸ ತಲೆಮಾರಿನಲ್ಲಿ ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದರು.
ಸಮ್ಮೇಳನದಲ್ಲಿ ಆಡಳಿತ ಸೇವೆಗಾಗಿ ಮಂಗಳೂರಿನ ಲ್ಯಾನ್ಸಿ ಮಸ್ಕರೇನ್ಹಾಸ್ ಮತ್ತು ರಮೇಶ್ ಶೇಠ್, ಸಮಾಜ ಸೇವೆಗಾಗಿ ನಾರಾಯಣ ಸುವರ್ಣ, ಮುಂಬೈ, ಹಾಲಸ್ವಾಮಿ ಕೆ.ಟಿ, ರಾಮರೆಡ್ಡಿ ಬೆಂಗಳೂರು, ರುದ್ರಾಣಿ ಬೆಂಗಳೂರು ಮತ್ತು ವಿರೇಶ್ ನಿಲನೂರು ದಾವಣಗೆರೆ ಹಾಗೂ ವಿವಿಧ ರಂಗದ ಸೇವೆಗಾಗಿ ಯಾಕೂಬ್ ಖಾದರ್ ಗುಲ್ವಾಡಿ ಅವರಿಗೆ `ವಿಶ್ವಕನ್ನಡ ಸಮ್ಮೇಳನ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಸಮ್ಮೇಳನದ ಅಂಗವಾಗಿ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಅನಿವಾಸಿ ಕನ್ನಡಿಗರ ಗೋಷ್ಠಿಯಲ್ಲಿ ಕತಾರ್ ತುಳುಕೂಟದ ಮಾಜಿ ಅಧ್ಯಕ್ಷ ರವಿ ಶೆಟ್ಟಿ, ಬಹರೇನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಆಸ್ಟಿನ್ ಸಂತೋಷ್, ದುಬೈಯ ಹರ್ಮನ್ ಲೂಯಿಸ್, ಅಬಧಾಬಿಯ ರವಿ ರೈ ಭಾಗವಹಿಸಿದ್ದರು. ಹಿರಿಯ ಪತ್ರಕರ್ತ, ಪ್ರೆಸ್ ಕ್ಲಬ್ ಅಧ್ಯಕ್ಷ ಇ.ವಿ.ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಗಲ್ಫ್ಫ್ ಕನ್ನಡಿಗ ಡಾಟ್ಕಾಮ್ನ ಪ್ರಧಾನ ಸಂಪಾದಕ ಬಿ.ಜಿ ಮೋಹನ್ದಾಸ್, ಮುಂಬೈಯ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಿ.ಡಿ ಜೋಶಿ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಡಾ. ಕೆ.ಎಸ್ ರಾಜು, ಮನೋಹರ್ ತೋನ್ಸೆ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.