ಬಸವಕಲ್ಯಾಣ: ತಾಲ್ಲೂಕಿನ ರೋಳಾ ಹತ್ತಿರದಲ್ಲಿ ಮುಲ್ಲಾಮಾರಿ ನಾಲೆಗೆ ಕಟ್ಟಲಾದ ಬ್ಯಾರೇಜ್ ಪ್ರದೇಶದಲ್ಲಿ ನಾಲಾ ಅಭಿವೃದ್ಧಿ ಮಾಡದ ಕಾರಣ ಅಧಿಕ ನೀರು ಸಂಗ್ರಹಗೊಳ್ಳುತ್ತಿಲ್ಲ.
ಸಮೀಪದ ನಿರ್ಗುಡಿ ರಸ್ತೆಯಲ್ಲಿ ಜಲಸಂಪನ್ಮೂಲ ಇಲಾಖೆಯಿಂದ 1.30 ಕೋಟಿ ರೂಪಾಯಿ ಖರ್ಚು ಮಾಡಿ ಸೇತುವೆ ಮತ್ತು ಬ್ಯಾರೇಜ್ ನಿರ್ಮಿಸಲಾಗಿದೆ. ಇದರ ಉದ್ದ 39 ಮೀಟರ್ ಮತ್ತು ಎತ್ತರ 3 ಮೀಟರ್ ಇದೆ. ಎರಡು ವರ್ಷಗಳ ಹಿಂದೆ ಕಟ್ಟಿದ ಈ ಬ್ಯಾರೇಜ್ ನಲ್ಲಿ ಈ ಸಲ ನೀರು ಸಂಗ್ರಹಗೊಂಡಿದ್ದು, ಹೆಚ್ಚಿನ ಸಂಗ್ರಹಣಾ ಸಾಮರ್ಥ್ಯ ಇಲ್ಲದ ಕಾರಣ ನಿರಂತರವಾಗಿ ನೀರು ಹರಿದು ಹೋಗುತ್ತಿದೆ.
ಮುಲ್ಲಾಮಾರಿ ಈ ಭಾಗದಲ್ಲಿನ ದೊಡ್ಡ ನಾಲೆಯಾಗಿದ್ದು, ಮಳೆಗಾಲದಲ್ಲಿ ಇದರಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಇದಕ್ಕೆ ಬ್ಯಾರೇಜ್ ನಿರ್ಮಿಸಿದ ಕಾರಣ ಬಾವಿಗಳ ಜಲಮಟ್ಟ ಏರಿದೆ.
ಆದರೆ ನಾಲೆ ಇಕ್ಕಟ್ಟಾಗಿರುವ ಕಾರಣ ಹೆಚ್ಚಿನ ನೀರು ಸಂಗ್ರಹ ಆಗುತ್ತಿಲ್ಲ. ಸೇತುವೆಯ ಮೇಲಿನಿಂದ ನೀರು ಹರಿಯುತ್ತಿದ್ದು, ರಸ್ತೆ ದಾಟಲು ತೊಂದರೆಯಾಗುತ್ತಿದೆ. ಅಲ್ಲದೆ ಪಕ್ಕದ ಹೊಲಗಳಿಗೂ ನೀರು ನುಗ್ಗುತ್ತಿದೆ. ಹೀಗಾಗಿ ಬ್ಯಾರೇಜ್ನ ಬಾಗಿಲುಗಳನ್ನು ತೆರೆದು ನೀರು ಹೊರ ಬಿಡಬೇಕಾದ ಪರಿಸ್ಥಿತಿ ಇದೆ.
ನೀರು ಹರಿದು ಬರುವ ಕಡೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ನಾಲೆಯಲ್ಲಿನ ಜಾಲಿ ಗಿಡಗಳನ್ನು ಕಡಿಯಬೇಕು. ನಾಲೆಯನ್ನು ಅಗಲ ಮಾಡುವುದಲ್ಲದೆ ಒಳಗಿನ ಹೂಳು ತೆಗೆಯಬೇಕು ಎಂದು ರೈತರಾದ ಬಂಡೆಪ್ಪ ಮತ್ತು ಅರ್ಜುನರಾವ ನಿರ್ಗುಡಿ ಒತ್ತಾಯಿಸಿದ್ದಾರೆ.
ಹೂಳು ತುಂಬಿಕೊಂಡಿರುವ ಕಾರಣ ಅಧಿಕ ನೀರು ಸಂಗ್ರಹಗೊಳ್ಳುತ್ತದೆ. ಇದನ್ನು ತಡೆಯಲು ಸಮೀಪದ ಹೊಲಗಳಲ್ಲಿನ ಬೆಳೆಗಳಿಗೆ ಚಿಕ್ಕ ಕಾಲುವೆ ನಿರ್ಮಿಸಿ ನೀರು ಸಾಗಿಸಬೇಕು ಎಂದು ಹೇಳುತ್ತಾರೆ.