ಬೆಂಗಳೂರು: ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) 2011-12ನೇ ಸಾಲಿನಲ್ಲಿ ಶೇ 9ನ್ನು ತಲುಪಲು, ಕೇಂದ್ರ ಬಜೆಟ್ನಲ್ಲಿ ಕೈಗೊಂಡಿರುವ ವಿತ್ತೀಯ ಕ್ರಮಗಳನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾಸಂಘ (ಎಫ್ಕೆಸಿಸಿಐ) ಸ್ವಾಗತಿಸಿದೆ. ಏಪ್ರಿಲ್ 1, 2012ನೇ ಸಾಲಿನಿಂದ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಹಾಗೂ ನೇರ ತೆರಿಗೆ ಕಾಯ್ದೆ (ಡಿಟಿಸಿ) ವ್ಯವಸ್ಥೆ ಜಾರಿಗೊಳಿಸುವುದಾಗಿ ಹೇಳಿದೆ.
ಭ್ರಷ್ಟಾಚಾರ ಮತ್ತು ಕಪ್ಪು ಹಣದ ಹಾವಳಿ ನಿಯಂತ್ರಿಸಲು ಬಿಗಿ ನಿಲುವುಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ ಎಂದು ‘ಎಫ್ಕೆಸಿಸಿಐ’ ಅಧ್ಯಕ್ಷ ಎನ್.ಎಸ್ ಶ್ರೀನಿವಾಸಮೂರ್ತಿ ಪ್ರತಿಕ್ರಿಯಿಸಿದ್ದಾರೆ. ವಿತ್ತೀಯ ಕೊರತೆಯನ್ನು ಶೇ 5.6ರಿಂದ ಶೇ 5.1ಕ್ಕೆ ತಗ್ಗಿಸಲು ಸರ್ಕಾರ ಕೈಗೊಂಡ ಪರಿಣಾಮಕಾರಿ ಕ್ರಮಗಳಿಗೆ ಮೆಚ್ಚುಗೆ ಸೂಚಿಸಿರುವ ‘ಎಫ್ಕೆಸಿಸಿಐ’ 2012ನೇ ಸಾಲಿನಲ್ಲಿ ಇದು ಶೇ 4.6ಕ್ಕೆ ಕುಸಿಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದೆ.
ಮೂಲಸೌಕರ್ಯ ವೃದ್ಧಿ, ತಯಾರಿಕಾ ಕ್ಷೇತ್ರ ಮತ್ತು ಕೃಷಿ ಅಭಿವೃದ್ಧಿಗೆ ಬಜೆಟ್ನಲ್ಲಿ ನೀಡಲಾಗಿರುವ ಉತ್ತೇಜನಾ ಕ್ರಮಗಳಿಗಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದೆ. ಕೆಐಒಸಿಎಲ್ ಸ್ವಾಗತ: ಕಬ್ಬಿನ ಅದಿರಿನ ಉಂಡೆಯನ್ನು ರಫ್ತು ತೆರಿಗೆಯಿಂದ ವಿನಾಯ್ತಿ ನೀಡಿರುವುದನ್ನು ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆಯ ಅಧ್ಯಕ್ಷ ಕೆ. ರಂಗನಾಥ ಅವರು ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಬಹಳ ದಿನಗಳಿಂದ ಇಂತಹ ಕ್ರಮ ನಿರೀಕ್ಷಿಸಲಾಗುತ್ತಿತ್ತು. ಒಟ್ಟಾರೆ ಕಬ್ಬಿಣ ಉಂಡೆ ತಯಾರಿಸುವ ಉದ್ದಿಮೆಯು ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ರಂಗನಾಥ ಅವರು ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.