ನವದೆಹಲಿ (ಪಿಟಿಐ/ಐಎಎನ್ಎಸ್): ಅಮೆರಿಕ ಯುದ್ದನೌಕೆಯ ಯೋಧರು ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿ ಒಬ್ಬ ಮೀನುಗಾರನನ್ನು ಹತ್ಯೆಗೈದು ಇತರ ಮೂವರಿಗೆ ಗಂಭೀರ ಗಾಯ ಉಂಟು ಮಾಡಿದ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲು ಮಂಗಳವಾರ ನಿರ್ಧರಿಸಿದೆ.
ಈ ಸಂಬಂಧ ಅಮೆರಿಕ ವಿಷಾದ ವ್ಯಕ್ತಪಡಿಸಿದಾಗ್ಯೂ ಭಾರತ ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮಂಗಳವಾರ ಪ್ರಕಟಿಸಿದೆ.
ತಾವು ಅಮೆರಿಕ ಹಾಗೂ ಯುಎಇ ಜತೆ ನಿರಂತರ ಸಂಪರ್ಕದಲ್ಲಿದ್ದು, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದು, ಶೀಘ್ರವೇ ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭಾರತದ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದರು.
ಈ ಮಧ್ಯೆ ಮಂಗಳವಾರ ಬೆಳಿಗ್ಗೆ ಅಮೆರಿಕದ ರಾಯಭಾರಿ ನ್ಯಾನ್ಸಿ ಪಾವೆಲ್ ಅವರು ಭಾರತದ ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಅವರಿಗೆ ದೂರವಾಣಿ ಕರೆ ಮಾಡಿ ಘಟನೆ ಬಗೆಗೆ ವಿಷಾದ ವ್ಯ್ಕತಪಡಿಸಿದರು ಅಲ್ಲದೆ ಈ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಸೋಮವಾರ ಸಂಜೆ ದುಬೈ ಸಾಗರ ಪ್ರದೇಶದಲ್ಲಿ ದುಬೈ ಕಂಪೆನಿಯೊಂದರ ಬಳಿ ದಿನಗೂಲಿ ನೌಕರಿಯಲ್ಲಿದ್ದ ಭಾರತೀಯರಿದ್ದ ದೋಣಿಯ ಮೇಲೆ ಅಮೆರಿಕ ಯುದ್ದನೌಕೆಯ ಸೈನಿಕರು ಹಾರಿಸಿದರು. ಘಟನೆಯಲ್ಲಿ ಒಬ್ಬ ಭಾರತೀಯ ಮೀನುಗಾರ ಬಲಿಯಾಗಿದ್ದು, ಇತರೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.