ಮಕ್ಕಳಿಗಾಗಿ ಹಲವು ಕೃತಿಗಳನ್ನು ಬರೆದಿರುವ ಗದಗದ ಲೇಖಕ ತಯಬಅಲಿ ಅ.ಹೊಂಬಳ ಅವರ ಇತ್ತೀಚಿನ ಕೃತಿ ‘ಅಮ್ಮ ಹೇಳಮ್ಮ’. ಮಕ್ಕಳಿಗಾಗಿ ಬರೆದಿರುವ ಈ ಪುಸ್ತಕದಲ್ಲಿ ಇಪ್ಪತ್ತೊಂಬತ್ತು ಕಥೆಗಳಿವೆ. ಶಿಶುಸಾಹಿತ್ಯದ ಸಿದ್ಧಸೂತ್ರವಾದ ನೀತಿಬೋಧೆ ಇಲ್ಲಿನ ಕಥೆಗಳಲ್ಲೂ ಇದೆ.
ಗುರುಭಕ್ತಿ, ದೇಶಪ್ರೇಮ, ದುರಾಸೆ, ಒಗ್ಗಟ್ಟು, ಧನಿಕ-ಭಿಕ್ಷುಕ ಸೇರಿದಂತೆ ಬಹುತೇಕ ಹಳೆಯ ವಸ್ತುಗಳ ಮೂಲಕವೇ ಹೊಸ ಕಥೆಗಳನ್ನು ರೂಪಿಸುವ ಪ್ರಯತ್ನ ಲೇಖಕರದು. ಪ್ರಾಣಿ ಪಕ್ಷಿಗಳು ಕೂಡ ಕಥೆಗಳಲ್ಲಿ ಬಂದುಹೋಗುತ್ತವೆ. ಕಥೆಗಳಿಗೆ ಓದಿಸಿಕೊಳ್ಳುವ ಗುಣವಿದೆಯಾದರೂ, ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಕಲ್ಪನೆಯಾಗಲೀ, ಆಕರ್ಷಕ ಭಾಷೆಯಾಗಲಿ ಇಲ್ಲಿನ ಕಥೆಗಳಲ್ಲಿಲ್ಲ. ವಸ್ತುವಿನ ದೃಷ್ಟಿಯಿಂದಲೂ ಲೇಖಕರು ಹೊಸತಾಗಿ ಯೋಚಿಸುವ ಪ್ರಯತ್ನ ನಡೆಸಿಲ್ಲ.