ಮಲೇಬೆನ್ನೂರು: ಇಲ್ಲಿನ ಗ್ರಾಮದೇವತೆ ಉತ್ಸವ 'ಅಮ್ಮನಹಬ್ಬ' ಕೊನೆ ದಿನ ಶುಕ್ರವಾರ `ಹುಲುಸು' ಒಡೆದು ಗ್ರಾಮಸ್ಥರಿಗೆ ಹಂಚುವ ಮೂಲಕ ವಿಧ್ಯುಕ್ತವಾಗಿ ತೆರೆ ಬಿದ್ದಿತು.
ಊರಹೊರಗಿನ ಅಮ್ಮನ ದೇವಾಲಯದಲ್ಲಿ ವಿಶೇಷ ಪೂಜಾವಿಧಿ, ಉಡಿತುಂಬುವುದು, ನೈವೇದ್ಯ, ಮಹಾಮಂಗಳಾರತಿ ನಂತರ ಹುಲುಸಿಗೆ ಹಾಗೂ ಆಯುಧಕ್ಕೆ ಪೂಜೆ ಮಾಡಿದರು.
ಏಕನಾಥಶೇಶ್ವರಿ ಉಧೋ.. ಉಧೋ.. ಹುಲಿಗ್ಯೋ ಉದ್ಘೋಷದ ಮಧ್ಯೆ ಹುಲುಸು (ಜೋಳದ ರಾಶಿ)ಗೆ ಸಾಂಪ್ರದಾಯಿಕವಾಗಿ ಪೂಜಿಸಿ ರಾಶಿಗೆ ಮುಚ್ಚಲಾಗಿದ್ದ ಬಟ್ಟೆ ತೆರೆದರು.
ಧಾನ್ಯವನ್ನು ಗ್ರಾಮದ ಮುಖಂಡರಿಗೆ ವಿತರಿಸಿ, ನಂತರ ಗ್ರಾಮಸ್ಥರಿಗೆ ಹಂಚಿದರು.ಹುಲುಸು ಪಡೆಯಲು ಜನತೆ ಮುಗಿಬಿದ್ದಿದ್ದರು.
ಏಕನಾಥೇಶ್ವರಿ ಹಾಗೂ ಕೋಡಿಮಾರೇಶ್ವರಿ ಉತ್ಸವಮೂರ್ತಿಗಳನ್ನು ಮೆರವಣಿಗೆ ಮೂಲಕ ಕರೆತಂದು ಗುಡಿ ತುಂಬಿಸಿ, ಕಂಕಣ ವಿಸರ್ಜಿಸಿ ಉತ್ಸವಕ್ಕೆ ಮಂಗಳ ಹಾಡಿದರು.
ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಗನಗೌಡ ಹಾಗೂ ಪದಾಧಿಕಾರಿಗಳು ಡಾ.ಎಂ.ಜಿ. ರಂಗನಾಥ್, ಶಾನುಭೋಗ್ ಶ್ರೀನಿವಾಸ್, ಉಡೇದರ್ ನಿಂಗಪ್ಪ, ಪೂಜಾರ್ ಬಸಪ್ಪ, ಕೆ.ಜಿ. ಮಂಜುನಾಥ್, ಗಫಾರ್ಖಾನ್, ತಿಪ್ಪೇಶ್ ಮುದೇಗೌಡ್ರ, ಲೋಕೇಶ್, ಶ್ರೀನಿವಾಸ್ ಜೋಯ್ಸ, ಸಂಕೊಳ್ಳಿ ಶಿವಣ್ಣ, ಯಲವಟ್ಟಿ ಬಸಣ್ಣ, ಕೆ.ಜಿ. ಪರಮೇಶ್, ಅರ್ಚಕ ಪ್ರಕಾಶಾಚಾರ್, ಸೋಮಶೇಖರ್, ಗೋಪಾಲ್ ಇದ್ದರು.