ವಿಜಾಪುರ: ತಾಲ್ಲೂಕಿನ ಅರಕೇರಿ (ಮುಮ್ಮೆಟ್ಟಿ) ಗುಡ್ಡದಲ್ಲಿ ಸೋಮ ವಾರ ಪ್ರಸಿದ್ಧ ಅಮೋಘ ಸಿದ್ಧೇಶ್ವರ ಜಾತ್ರೆಯ ವೈಭವ. ಛಟ್ಟಿ ಅಮಾವಾಸ್ಯೆ ಯಂದು ಲಕ್ಷಾಂತರ ಭಕ್ತರು ಪಾಲ್ಗೊಂಡು, ‘ದೇವರ ಭೇಟಿ’ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಮಹಾರಾಷ್ಟ್ರ ಮತ್ತು ಕರ್ನಾಟಕದ 150ಕ್ಕೂ ಹೆಚ್ಚು ಗ್ರಾಮಸ್ಥರು ತಮ್ಮೂ ರಿನ ದೇವರ ಪಲ್ಲಕ್ಕಿಯೊಂದಿಗೆ ಮುಮ್ಮೆಟ್ಟಿ ಗುಡ್ಡಕ್ಕೆ ಆಗಮಿಸಿದ್ದರು. ದೇವಸ್ಥಾನದ ಎದುರಿನ ಬಯಲು ಜಾಗೆಯಲ್ಲಿ ಈ ಪಲ್ಲಕ್ಕಿಗಳನ್ನು ಇಡಲಾ ಗಿತ್ತು. ಆ ಪ್ರದೇಶ ಪಲ್ಲಕ್ಕಿ ಮತ್ತು ಭಕ್ತರಿಂದ ತುಂಬಿತ್ತು.
ಮಧ್ಯಾಹ್ನದ ನಂತರ ಈ ಎಲ್ಲ ಪಲ್ಲಕ್ಕಿಗಳಿಗೆ ಅಮೋಘಸಿದ್ಧೇಶ್ವರ ದೇವಸ್ಥಾನದ ಪಲ್ಲಕ್ಕಿಯ ದರ್ಶನ ಕೊಡಿಸಲಾಯಿತು. ಇದಕ್ಕೆ ದೇವರ ಭೇಟಿ ಎಂದು ಕರೆಯಲಾಗುತ್ತಿದೆ. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಭಕ್ತರು, ಅಪಾರ ಪ್ರಮಾಣದ ಭಂಡಾರ (ಅರಿ ಷಿಣ ಪುಡಿ) ಎರಚಿ ಸಂಭ್ರಮಿಸಿದರು. ಆವೇಷ ಭರಿತರಾಗಿ ಡೊಳ್ಳುಗಳನ್ನು ನುಡಿಸಿ–ಕುಣಿದು ಕುಪ್ಪಳಿಸಿದರು.
ಮನೆಯಿಂದ ತಂದಿದ್ದ ಹೋಳಿಗೆ–ಕರಿಗಡಬಿನ ನೈವೇದ್ಯವನ್ನು ದೇವರಿಗೆ ಸರ್ಮಪಿಸಿ, ಸಹಭೋಜನ ಸವಿದರು. ಅಮೋಘಸಿದ್ಧರ ಮೂಲ ಗದ್ದುಗೆಗೆ ಮಹಾಪೂಜೆ, ಭಂಡಾರ ಪೂಜೆ ನಸುಕಿನಲ್ಲಿ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ನಾಲ್ಕೈದು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಆಡಳಿತ ಮಂಡಳಿಯ ವಿವಾದದ ಹಿನ್ನೆಲೆಯಲ್ಲಿ ಈ ದೇವಸ್ಥಾನದಲ್ಲಿ ಇತ್ತೀಚೆಗೆ ಭಕ್ತರೊಬ್ಬರ ಕೊಲೆ ನಡೆದಿತ್ತು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.