ಚಿಂಚೋಳಿ: ತಾಲ್ಲೂಕಿನ ಕೊಂಚಾವರಂ ಕಾಯ್ದಿಟ್ಟ ಅರಣ್ಯದ ಸಾವಿರಾರು ಹೆಕ್ಟೇರ್ ಜಮೀನು ಒತ್ತುವರಿ ಮಾಡಿಕೊಂಡು 7/8 ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ತೆರವುಗೊಳಿಸುತ್ತಿರುವ ಪ್ರಾದೇಶಿಕ ಅರಣ್ಯ ಇಲಾಖೆಯ ಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರಾದ ನರಸಿಮಲು ಪೂಜಾರಿ, ವಿಠಲ್ ಕಾರಭಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಒತ್ತುವರಿ ತೆರವು ಗೊಳಿಸಿದರೆ ಜೀವ ಕೊಡಲು ಸಿದ್ಧ ಎಂದರು.
ಶುಕ್ರವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಉಭಯ ಸದಸ್ಯರು, ಅರಣ್ಯದಿಂದ ರೈತರನ್ನು ಹೊರ ದಬ್ಬಿದರೆ ಅವರಿಗೆ ಬೇರೆ ಕಡೆ ಭೂಮಿ ಕೊಡಬೇಕು. ಇಲ್ಲದೇ ಹೋದರೆ ನೂರಾರು ವರ್ಷಗಳಿಂದ ಇದೇ ಭೂಮಿ ಅವಲಂಭಿಸಿದ ಸಾವಿರಾರು ಕುಟುಂಬಗಳ ಗತಿ ಏನು ಎಂದು ಪ್ರಶ್ನಿಸಿದರು.
ಆಗ ಕಾರ್ಯ ನಿರ್ವಹಣಾಧಿಕಾರಿ (ಇಒ) ಜಗದೇವ ಬೈಗೊಂಡ ಸದರಿ ವಿಷಯ ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿದರು.
ಈಗಾಗಲೇ ನೂರಾರು ರೈತರಿಗೆ ಜಮೀನು ಖಾಲಿ ಮಾಡಲು ನೋಟಿಸ್ ನೀಡಿದ್ದಾರೆ. ಅರಣ್ಯ ಉಳಿಯಲು ನಾವು ಸಹಕರಿಸುತ್ತೇವೆ. ಆದರೆ ನಮಗೆ ಬೇರೆ ಕಡೆ ಜಮೀನು ಕೊಡಿಸಿ ಎಂದರು.
ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಉದ್ದು ಹೆಸರು ಬೆಳೆ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಉಂಟಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಎಂ ಮಲ್ಲಿಕಾರ್ಜುನ ತಿಳಿಸಿದರು.
ಪಸ್ತಪೂರ, ಮೋಘಾ, ರುಮ್ಮನಗೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಬೆಳೆ ಹಾನಿ ಉಂಟಾಗಿದೆ ಹಾಗೂ ಕ್ಷೇತ್ರದ ಉಳಿದ ಕಡೆಗಳಲ್ಲಿ ಉಂಟಾದ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕೆಂದು ಅಧ್ಯಕ್ಷ ರಾಮರಾವ್ ಪಾಟೀಲ್ ಸೂಚಿಸಿದರು.