ನವದೆಹಲಿ (ಐಎಎನ್ಎಸ್): ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಇಲ್ಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಬಗ್ಗೆ ನಿರ್ಧಾರ ಕೈಗೊಳ್ಳಲು 10 ದಿನಗಳ ಕಾಲಾವಕಾಶ ಕೋರಿದರು.
ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರಿಗೆ ಬರೆದ ಪತ್ರಕ್ಕೆ ಉತ್ತರ ಬಂದ ಬಳಿಕ ಆಯಾ ಪಕ್ಷಗಳ ನಿಜವಾದ ಉದ್ದೇಶ ಏನು ಎಂಬುದು ಬಹಿರಂಗವಾಗಲಿದೆ ಎಂದರು.
ಶೀಘ್ರ ಪ್ರತಿಕ್ರಿಯೆ–ಕಾಂಗ್ರೆಸ್: ಸರ್ಕಾರ ರಚನೆಗೆ ಮುನ್ನ ಹೊಸತಾಗಿ ಕೆಲವು ಷರತ್ತುಗಳನ್ನು ಹಾಕಿರುವ ಕೇಜ್ರಿವಾಲ್ ಪತ್ರಕ್ಕೆ ಒಂದೆರಡು ದಿನಗಳಲ್ಲಿ ಪ್ರತಿಕ್ರಿಯೆ ನೀಡಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹ್ಮದ್ ತಿಳಿಸಿದ್ದಾರೆ.
ಉದ್ಧಟತನ–ಬಿಜೆಪಿ: ಆಮ್ ಆದ್ಮಿ ಪಕ್ಷದ ವರ್ತನೆ ಉದ್ಧಟತನದಿಂದ ಕೂಡಿದೆ ಎಂದು ಬಿಜೆಪಿ ಟೀಕಿಸಿದೆ. ಆಮ್ ಆದ್ಮಿ ಪಕ್ಷ ಇತರ ಪಕ್ಷಗಳ ವಿರುದ್ಧ ಆರೋಪ ಮಾಡುವುದರ ಬದಲಿಗೆ ಸರ್ಕಾರ ರಚನೆ ಬಗ್ಗೆ ಗಮನ ಕೇಂದ್ರೀಕರಿಸಬೇಕೆಂದು ಬಿಜೆಪಿ ನಾಯಕ ಬಲಬೀರ್ ಪುಂಜ್ ಸಲಹೆ ಮಾಡಿದ್ದಾರೆ.
ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ: ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದೆ ದೆಹಲಿ ಜನರ ನಿರೀಕ್ಷೆಗಳನ್ನು ಈಡೇರಿಸಿ ಎಂದು ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ಹೇಳಿದೆ.
ಆಮ್ ಆದ್ಮಿ ಹೊಸ ರಾಜಕೀಯ ಪಕ್ಷ. ಅವರ ಆದರ್ಶಗಳು ಏನು ಎಂಬುದು ಜನರಿಗೆ ತಿಳಿದಿಲ್ಲ. ಪಕ್ಷ ಜಾತ್ಯತೀತ ನಿಲುವು ಹೊಂದಿದೆ ಎಂದು ನಾವುಭಾವಿಸಿದ್ದೇವೆ. ಹಾಗಾಗಿ ಸರ್ಕಾರ ರಚಿಸಲು ಬಾಹ್ಯ ಬೆಂಬಲ ನೀಡುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಕಾಂಗ್ರೆಸ್ ವಕ್ತಾರ ಭಕ್ತ ಚರಣದಾಸ್ ಹೇಳಿದ್ದಾರೆ.
ನಾವು ಯಾವುದೇ ಷರತ್ತಿಲ್ಲದೆ ಬೆಂಬಲ ನೀಡುತ್ತೇವೆ. ನಮ್ಮ ನಡುವೆ ಯಾವುದೇ ಕರಾರು ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಂಬಲ ನೀಡಿಕೆ ಸರಿಯಲ್ಲ– ತಿವಾರಿ: ಅನನುಭವಿ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಿಸ ಬಾರದಿತ್ತು ಎಂದು ಕೇಂದ್ರ ಸಚಿವ ಮನೀಶ್ ತಿವಾರಿ ಹೇಳಿದ್ದಾರೆ.
‘ಬೆಂಬಲ ಘೋಷಿಸಬೇಕಾಗಿತ್ತು ಎಂದು ನಾನು ಭಾವಿಸುವುದೇ ಇಲ್ಲ. ನಾವು 15 ವರ್ಷ ಕಾಲ ದೆಹಲಿಯನ್ನು ಆಳಿದ್ದೇವೆ. ಈಗ ದೆಹಲಿ ಜನತೆಯ ತೀರ್ಪನ್ನು ವಿನಮ್ರವಾಗಿ ಒಪ್ಪಿಕೊಳ್ಳ ಬೇಕು’ ಎಂದು ತಿವಾರಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.