ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆ ಬಗ್ಗೆ ವರದಿ, ಶೀಘ್ರ ಸಿಂಡಿಕೇಟ್ ಸಭೆ

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಬ್ಬರು ಇರಬಹುದಾದ ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ನಾಲ್ಕೈದು ಮಂದಿ ವಿದ್ಯಾರ್ಥಿಗಳು, ಗಬ್ಬೆದ್ದು ನಾರುವ ಶೌಚಾಲಯ, ಕಿಟಕಿ ಬಾಗಿಲು ಇಲ್ಲದ ಆರೋಗ್ಯ ಕೇಂದ್ರ... ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ವಿದ್ಯಾರ್ಥಿ ನಿಲಯ, ಆರೋಗ್ಯ ಕೇಂದ್ರಕ್ಕೆ ವಿ.ವಿ. ಕುಲಸಚಿವ (ಅಡಳಿತ) ಪ್ರೊ. ಬಿ.ಸಿ. ಮೈಲಾರಪ್ಪ ಅವರು ಭೇಟಿ ನೀಡಿದಾಗ ಕಂಡು ಬಂದ ವಾಸ್ತವಗಳಿವು.

ಮೊದಲು ಅವರು ವಿ.ವಿಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಆರೋಗ್ಯ ಕೇಂದ್ರದ ಕೆಲ ಕೊಠಡಿ ಹಾಗೂ ಶೌಚಾಲಯಕ್ಕೆ ಬಾಗಿಲು ಇಲ್ಲದಿರುವುದು ವೀಕ್ಷಿಸಿದರು. ಆ ನಂತರ ಅವರು ಸ್ನಾತಕೋತ್ತರ ವಿದ್ಯಾರ್ಥಿ ನಿಲಯ (ಒಂದಕ್ಕೆ) ಹೋದರು. ಕುಲಪತಿ, ಕುಲಸಚಿವರು ಕೇವಲ ಪ್ರಚಾರಕ್ಕಾಗಿ ಭೇಟಿ ನೀಡುತ್ತಾರೆಯೇ ಹೊರತು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿಲಯದ ಒಳಗೆ ಪ್ರವೇಶಿಸಿದ ಮೈಲಾರಪ್ಪ ಅಲ್ಲಿನ ಅವ್ಯವಸ್ಥೆಗಳನ್ನು ಪರಿಶೀಲಿಸಿದರು. ಇಬ್ಬರು ಇರಬಹುದಾದ ಕೊಠಡಿಯಲ್ಲಿ ನಾಲ್ಕು, ಐದು ಮಂದಿ ಉಳಿದುಕೊಂಡಿದ್ದನ್ನು ಗಮನಿಸಿದರು. ಶೌಚಾಲಯ ಅವ್ಯವಸ್ಥೆಯನ್ನೂ  ನೋಡಿದರು.

ಅಲ್ಲಿಂದ ವಿ.ವಿಯ ಈಜುಕೊಳಕ್ಕೆ ಹೋದರೆ ಈಜುಕೊಳದ ಟೈಲ್ಸ್‌ಗಳು ಒಡೆದು ಹೋಗಿವೆ ಮತ್ತು ನೀರು ಶುದ್ಧೀಕರಿಸುವ ಯಂತ್ರ ಕೆಟ್ಟು ಎರಡು ವರ್ಷವಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು. ದುರಸ್ತಿ ಮಾಡಿಸುವಂತೆ ಹಲವು ಬಾರಿ ದೂರು ನೀಡಿದ್ದರೂ ಏನು ಪ್ರಯೋಜನಾ ಆಗಿಲ್ಲ ಎಂದು ಅವರು ಅಳಲು ತೋಡಿಕೊಂಡರು.

ದೃಶ್ಯ- ಕಲೆ ವಿಭಾಗದ ನೂತನ ಕಟ್ಟಡದ ಕಾಮಗಾರಿ ಪೂರ್ಣವಾಗದಿರುವ ಬಗ್ಗೆ, ಪರೀಕ್ಷಾ ಭವನ, ಸಿದ್ದ ಉಡುಪು ತಂತ್ರಜ್ಞಾನ ವಿಭಾಗದ ಕಟ್ಟಡ, ಮುದ್ರಣಾಲಯ ಕಟ್ಟಡಗಳ ಕಾಮಗಾರಿ ಶೇ 95ರಷ್ಟು ಪೂರ್ಣಗೊಂಡಿದ್ದರೂ ಅಂತಿಮ ಹಂತದ ಕಾಮಗಾರಿ ಸ್ಥಗಿತಗೊಂಡು ಕಟ್ಟಡ ಉದ್ಘಾಟನೆ ಆಗದಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಅನಾಗರಿಕ ವ್ಯವಸ್ಥೆ:
`ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ವಿ.ವಿ.ಯಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದ್ದನ್ನು ನೋಡಿ ನಾನೇ ಅವಾಕ್ಕಾದೆ. ಇಂತಹ ಅನಾಗರಿಕ ವಾತಾವರಣದಲ್ಲಿ ವಿದ್ಯಾರ್ಥಿಗಳು ಹೇಗೆ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಖೇದ ಉಂಟಾಗುತ್ತಿದೆ. ಆರೋಗ್ಯ ಕೇಂದ್ರದಲ್ಲಿಯೂ ಎಲ್ಲ ವ್ಯವಸ್ಥೆಗಳಿಲ್ಲ.
 
ಬಾಗಿಲು ಕಿಟಕಿ ಸೇರಿದಂತೆ ಮೂಲ ವ್ಯವಸ್ಥೆಗಳೇ ಅಲ್ಲಿಲ್ಲ~ ಎಂದು ಮೈಲಾರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. `ಶೇ 95ರಷ್ಟು ಕಾಮಗಾರಿ ಆಗಿರುವ ಕಟ್ಟಡಗಳೂ ಪಾಳು ಬಿದ್ದಿವೆ. ಹಣ ಸಂದಾಯ ಆಗದ ಕಾರಣ ಕಾಮಗಾರಿ ನಿಲ್ಲಿಸಿರುವುದಾಗಿ ಕೆಲವು ಗುತ್ತಿಗೆದಾರರು ದೂರಿದ್ದಾರೆ. ಯಾವ ಕಾರಣಕ್ಕೆ ಹಣ ಸಂದಾಯ ಆಗಿಲ್ಲ ಎಂದು ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
 

ಜ್ಞಾನಭಾರತಿ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಅವ್ಯವಸ್ಥೆ, ಪೂರ್ಣಗೊಳ್ಳದ ಕಟ್ಟಡ ಕಾಮಗಾರಿ ಈ ಎಲ್ಲ ವಿಷಯಗಳ ಬಗ್ಗೆ ಸಮಗ್ರ ವರದಿ ತಯಾರಿಸುತ್ತೇನೆ. ಇದನ್ನು ಚರ್ಚಿಸಲು ವಿಶೇಷ ಸಿಂಡಿಕೇಟ್ ಸಭೆ ಕರೆಯಲಾಗುತ್ತದೆ~ ಎಂದು ಅವರು ಹೇಳಿದರು.

ಅಸಮಾಧಾನ
ವಿ.ವಿಯ ಕುಲಪತಿ ಮತ್ತು ನನ್ನ ಸ್ವಪ್ರತಿಷ್ಠೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಲು ಬಿಡುವುದಿಲ್ಲ. ವೈದ್ಯರಾಗಿದ್ದ ವ್ಯಕ್ತಿಯೊಬ್ಬರು ಕುಲಪತಿ ಆದರೂ ಆರೋಗ್ಯ ಕೇಂದ್ರದ ಬಗ್ಗೆ ಗಮನ ಹರಿಸಿಲ್ಲ
ಪ್ರೊ. ಬಿ.ಸಿ. ಮೈಲಾರಪ್ಪ, ವಿ.ವಿ. ಕುಲಸಚಿವ (ಅಡಳಿತ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT