ಗದಗ: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಗದುಗಿನ ಎ.ಎಸ್.ಎಸ್ ವಾಣಿಜ್ಯ ಪದವಿಪೂರ್ವ ಕಾಲೇಜು ಹಾಗೂ ವಿಡಿಎಸ್ ಬಾಲಕಿಯರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಥ್ರೋಬಾಲ್ ಟೂರ್ನಿ ಕಾಟಾಚಾರಕ್ಕೆ ಏರ್ಪಡಿಸಿದ್ದಂತೆ ಇತ್ತು.
ಎಎಸ್ಎಸ್ ಕಾಲೇಜು ಮೈದಾನದಲ್ಲಿ ಮೂರು ಅಂಕಣಗಳನ್ನು ಸಿದ್ಧಗೊಳಿಸಲಾಗಿತ್ತು. ಆದರೆ ಅದು ಥ್ರೋಬಾಲ್ ನಿಯಮದಂತೆ ಇರಲಿಲ್ಲ. ಅಂಕಣದ ಒಳಗೆ ಫ್ರಂಟ್ ಜೋನ್, ಸೆಂಟ್ರಲ್ ಜೋನ್ ಹಾಗೂ ಬ್ಯಾಕ್ ಜೋನ್ ನಿಗದಿಗೊಳಿಸಿ ಬಿಳಿಪಟ್ಟೆಯಿಂದ ಗುರುತು ಮಾಡಬೇಕು. ಆದರೆ ಇದರ ಪರಿವೆ ಇಲ್ಲದೆ ಸಂಘಟಕರು ಮೈಸೂರು ಮತ್ತು ಉಡುಪಿಯ ನಡುವೆ ಸೋಮವಾರ ಪಂದ್ಯವನ್ನು ಪ್ರಾರಂಭಿಸಿಯೇ ಬಿಟ್ಟರು.
ಆಟದ ಅಂಕಣದ ಹತ್ತಿರ ಬಂದ ಆಟಗಾರ್ತಿಯರು ಜೋನ್ ಗುರುತು ಮಾಡದೆ ಇರುವುದನ್ನು ಕಂಡು ಅವಕ್ಕಾದರು. ಜೋನ್ ಗುರುತು ಮಾಡಬೇಕು. ಇಲ್ಲದಿದ್ದರೆ ಆಟದ ಸಮಯದಲ್ಲಿ ಬಾಲನ್ನು ಯಾರು ಹಿಡಿಯಬೇಕು ಎನ್ನುವುದರ ಬಗ್ಗೆ ಗೊಂದಲ ಉಂಟಾಗುತ್ತದೆ. ಜೋನ್ ಗುರುತು ಮಾಡದಿದ್ದರೆ ಆಟವನ್ನೇ ಆಡುವುದಿಲ್ಲ ಎಂದು ಕುಳಿತರು.
ನಂತರ ಸಂಘಟಕರು ಹಾಗೂ ಕೆಲ ಸಿಬ್ಬಂದಿ ಆಟಗಾರರ ಮನಸ್ಸನ್ನು ಒಲಿಸಿದರು. ತದ ನಂತರ ಆಟ ಪ್ರಾರಂಭಿಸಿದರು. ಆದರೆ ಜೋನ್ ಇಲ್ಲದೆ ಹೋಗಿದ್ದರಿಂದ ಬ್ಯಾಕ್ ಜೋನಿನ ಆಟಗಾರ್ತಿ ಸೆಂಟ್ರಲ್ ಜೋನ್ಗೆ ಬಂದು ಬಾಲು ಹಿಡಿಯುತ್ತಿದ್ದರು.
ಸೆಂಟ್ರಲ್ ಜೋನಿಗೆ ಬಾಲ್ ಬರುತ್ತಿದ್ದರೇ, ಅದು ಬ್ಯಾಕ್ ಜೋನಿನವರದ್ದು ಎಂದು ಗಲಿಬಿಲಿಗೊಂಡು ಬಾಲನ್ನು ಬಿಟ್ಟ ಘಟನೆಗಳು ನಡೆಯಿತು.ಅಷ್ಟು ದೂರದಿಂದ ಬಂದಿದ್ದೇವೆ. ಇನ್ನೇನು ಮಾಡಲು ಸಾಧ್ಯ ಎಂದು ಆಟವಾಡಲಾಯಿತು ಎಂದು ಮೈಸೂರಿನ ಕೆಲ ಆಟಗಾರ್ತಿಯರು ಬೇಸರ ವ್ಯಕ್ತಪಡಿಸಿದರು.
ಇಷ್ಟೇ ಅಲ್ಲದೇ ವಿಡಿಎಸ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬಾಲಕರ ವಿಭಾಗದ ಟೂರ್ನಿಯಲ್ಲಿ ಬೆಳಿಗ್ಗೆ ನಡೆದ ಮೂರು ಪಂದ್ಯಗಳನ್ನು ರದ್ದುಗೊಳಿಸಲಾಯಿತು ಎನ್ನಲಾಗಿದೆ. ರದ್ದಾದ ನಂತರ ಮತ್ತೆ ಪಂದ್ಯಗಳನ್ನು ನಡೆಸಲಾಯಿತು ಎಂದು ಅಧಿಕಾರಿ ಯೊಬ್ಬರು ತಿಳಿಸಿದರು.
ರಾಜ್ಯಮಟ್ಟದ ಪಂದ್ಯಾವಳಿ ಎನ್ನುತ್ತಾರೆ. ಬೆಳಿಗ್ಗೆವರೆಗೂ ಅಂಕಣಗಳೇ ಸಿದ್ಧಗೊಂಡಿರಲಿಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆಯವರಿಗೆ ಥ್ರೋಬಾಲ್ನ ನೀತಿ-ನಿಯಮವೇ ಗೊತ್ತಿಲ್ಲ. ಆದರೂ ಆಟ ಆಯೋಜನೆ ಮಾಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಂಪೈರ್ ಒಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರು ನಾಪತ್ತೆ: ರಾಜ್ಯಮಟ್ಟದ ಥ್ರೋಬಾಲ್ ಟೂರ್ನಿ ಯನ್ನು ಉದ್ಘಾಟಿಸಲು ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕಾಗಿತ್ತು. ಅವರು ನಾಪತ್ತೆ. ಇನ್ನು ಸ್ಥಳೀಯ ಶಾಸಕ ಶ್ರೀಶೈಲಪ್ಪ ಬಿದರೂರ ಅವರೇ ಟೂರ್ನಿಗೆ ಚಾಲನೆ ನೀಡಿದರು. ಆದರೆ ಬೆಳಿಗ್ಗೆ 10ಕ್ಕೆ ಇದ್ದ ಸಮಾರಂಭಕ್ಕೆ 11.30ಕ್ಕೆ ಆಗಮಿಸಿದ ಬಿದರೂರ ಕಾರ್ಯಕ್ರಮ ಉದ್ಘಾಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.