ನವದೆಹಲಿ (ಪಿಟಿಐ): ಕಳೆದ ಕೆಲವು ವರ್ಷಗಳಿಂದ ಅಭಿವೃದ್ಧಿಹೊಂದಿದ ರಾಷ್ಟ್ರಗಳು ಅನುಸರಿಸಿಕೊಂಡು ಬರುತ್ತಿರುವ ಅಸಾಂಪ್ರದಾಯಿಕ ಆರ್ಥಿಕ ನೀತಿಯನ್ನು ನಿಯಮಿತವಾಗಿ ಕೈಬಿಡಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ಕರೆ ನೀಡಿದ್ದಾರೆ.
ಜಿ-20 ಶೃಂಗ ಸಭೆಗೆ ಭಾಗವಹಿಸಲು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ಗೆ ತೆರಳುವ ಮುನ್ನ ಹೇಳಿಕೆ ನೀಡಿರುವ ಪ್ರಧಾನಿ, ಭಾರತ ಹಾಗೂ ಇತರ ನಾಲ್ಕು ಬ್ರಿಕ್ಸ್ ರಾಷ್ಟ್ರಗಳಲ್ಲಿನ ನಿಧಾನ ಗತಿಯ ಪ್ರಗತಿಯ ಹಿನ್ನೆಲೆಯಲ್ಲಿ ಅಸಾಂಪ್ರದಾಯಿಕ ಆರ್ಥಿಕ ನೀತಿಯಿಂದ ದೂರ ಸರಿಯಬೇಕಾದ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.
`ಉದ್ಯಮಶೀಲ ರಾಷ್ಟ್ರಗಳಲ್ಲಿ ಪ್ರಗತಿಯ ಲಕ್ಷಣಗಳು ಕಂಡುಬಂದರೂ, ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕ ಶಕ್ತಿಗಳಲ್ಲಿ ಹಿಂಜರಿತ ಇದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಸಾಂಪ್ರದಾಯಿಕ ಆರ್ಥಿಕ ನೀತಿಯನ್ನು ನಿಯಮಿತವಾಗಿ ಕೈಬಿಡುವ ಅಗತ್ಯವನ್ನು ಜಿ-20 ಶೃಂಗ ಸಭೆಯಲ್ಲಿ ಒತ್ತಿ ಹೇಳುತ್ತೇನೆ' ಎಂದು ಸಿಂಗ್ ಹೇಳಿದ್ದಾರೆ.
ಆರ್ಥಿಕ ಸ್ಥಿರತೆ ಬಲಪಡಿಸುವುದು, ರೂಪಾಯಿ ಮೌಲ್ಯ ವರ್ಧನೆ ಹಾಗೂ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ನಿರ್ಮಿಸಲು ಭಾರತವು ಹಲವಾರು ಕ್ರಮಗಳನ್ನು ಕೈಗೊಂಡಿರುವ ಹೊತ್ತಿನಲ್ಲಿಯೇ ಜಿ-20 ಶೃಂಗಸಭೆ ನಡೆಯುತ್ತಿದೆ ಎಂದು ಉಲ್ಲೇಖಿಸಿರುವ ಅವರು, `ಆರ್ಥಿಕ ಪ್ರಗತಿಯನ್ನು ಪುನರ್ಪರಿಶೀಲಿಸಲು ಸ್ಥಿರ ಹಾಗೂ ಉತ್ತೇಜನಕಾರಿ ಬಾಹ್ಯ ಆರ್ಥಿಕ ವಾತಾವರಣದ ಅಗತ್ಯವಿದೆ. ಇದಕ್ಕೆ ಶೃಂಗ ಸಭೆಯು ಮಹತ್ವದ ವೇದಿಕೆಯಾಗಿದೆ' ಎಂದಿದ್ದಾರೆ.
ಜಿ-20 ದೇಶಗಳು
ಭಾರತ, ಚೀನಾ, ಅಮೆರಿಕ, ಬ್ರಿಟನ್, ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ ಹಾಗೂ ಐರೋಪ್ಯ ಒಕ್ಕೂಟ