ಗಂಗಾವತಿ: ಸೂಕ್ತವಲ್ಲದ ಹಾಗೂ ಅಸುರಕ್ಷಿತ ಕೆಲಸಕ್ಕೆ ನಿಯೋಜನೆ ಮಾಡಿದ್ದರಿಂದ ಕೂಲಿಕಾರ್ಮಿಕ ಮಹಿಳೆ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಆರೋಪಿಸಿ ಹೊಸಳ್ಳ ಗ್ರಾಮದ ಕೂಲಿಕಾರರು ಸೋಮವಾರ ತಾಲ್ಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಆಳೆತ್ತರದ ನೀರಿರುವ ಕಾಲುವೆ ಮತ್ತು ಕೆರೆಗಳಲ್ಲಿ ಹೂಳೆತ್ತಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಿದ್ದಾರೆ.
ಆದರೆ, ಅಸುರಕ್ಷಿತ ಸ್ಥಳದಲ್ಲಿ ಕೆಲಸಕ್ಕೆ ಕಾರ್ಮಿರನ್ನು ನಿಯೋಜನೆ ಮಾಡಬಾರದು ಎಂದು ಸರ್ಕಾರದ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಡಿದ ಯಡವಟ್ಟಿನಿಂದ ಬಾಳಮ್ಮ ಭೀಮಪ್ಪ ಎಂಬ ಮಹಿಳೆ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಮುಖಂಡ ಎಲ್. ತಿಮ್ಮಣ್ಣ ದೂರಿದರು.
ಕೂಲಿಕಾರರೊಂದಿಗೆ ತಾಲ್ಲೂಕು ಪಂಚಾಯಿತಿ ಇಒ ಎಸ್.ಎನ್. ಮಠ, ನರೇಗಾ ಯೋಜನಾ ನಿರ್ದೇಶಕ ಮಹಾಬಳೇಶ್ವರ, ಚಿಕ್ಕಜಂತಕಲ್ ಪಂಚಾಯಿತಿ ಪಿಡಿಒ ನಾಗೇಶ ಮತ್ತು ಜೆಇ ವಿಜಯಕುಮಾರ ಜತೆ ಚರ್ಚಿಸಿದರು. ತಾ.ಪಂ. ಸದಸ್ಯ ಶರಣೇಗೌಡ ಪೊಲೀಸಪಾಟೀಲ್ ಸಂಧಾನ ನಡೆಸಿದರು.