ನವದೆಹಲಿ (ಪಿಟಿಐ): ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಕಿಂಗ್ ಫಿಶರ್ ವಿಮಾನಯಾನಗಳ ಅಸ್ತವ್ಯಸ್ತತೆ ಬಗ್ಗೆ ಹಾಜರಾಗಿ ವಿವರಣೆ ನೀಡುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಕಿಂಗ್ ಫಿಶರ್ ವಿಮಾನ ಯಾನ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಉನ್ನತ ಅಧಿಕಾರಿಗಳಿಗೆ ಸೋಮವಾರ ಸಮನ್ಸ್ ಕಳುಹಿಸಿದೆ.
ಈ ಮಧ್ಯೆ ವಿಮಾನಯಾನ ಸಂಸ್ಥೆಗೆ ಯಾವುದೇ ವಿನಾಯ್ತಿ ನೀಡುವ ಸಾಧ್ಯತೆಗಳನ್ನು ಸರ್ಕಾರ ತಳ್ಳಿ ಹಾಕಿದೆ.
ಕಿಂಗ್ ಫಿಶರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಜಯ್ ಅಗರ್ ವಾಲ್ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಮಂಗಳವಾರ ತನ್ನ ಮುಂದೆ ಹಾಜರಾಗಿ ವಿಮಾನಯಾನ ಸೇವೆ ರದ್ಧತಿಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಡಿಜಿಸಿಎ ಸೂಚಿಸಿದೆ.
ಸಂಸ್ಥೆಯು ಸೋಮವಾರ 20 ಕ್ಕೂ ಹೆಚ್ಚು ವಿಮಾನ ಯಾನಗಳನ್ನು ರದ್ದು ಪಡಿಸಿದೆ. ಆರು ಮೆಟ್ರೋ ನಗರಗಳಿಂದ ಭಾನುವಾರ 80ಕ್ಕೂ ಹೆಚ್ಚು ವಿಮಾನ ಯಾನಗಳು ರದ್ದಾಗಿ ನೂರಾರು ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದರು.
ಶುಕ್ರವಾರದಿಂದಲೇ ವಿಮಾನಯಾನ ಸಂಸ್ಥೆಯ ವಿಮಾನ ಸೇವೆ ರದ್ದಾಗುತ್ತಿದ್ದು ಈ ಬಗ್ಗೆ ಡಿಜಿಸಿಎಗೆ ವರದಿ ನೀಡಲು ಸಂಸ್ಥೆಗೆ ಸಾಧ್ಯವಾಗಿಲ್ಲ.
ಈ ಮಧ್ಯೆ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರು ಸರ್ಕಾರವು ವಿಮಾನಯಾನ ಸಂಸ್ಥೆಗೆ ಯಾವುದೇ ವಿನಾಯ್ತಿ ನೀಡುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.