ನವದೆಹಲಿ (ಪಿಟಿಐ): ಅಸ್ಸಾಂನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಯಾವುದೇ ಪರಿಸ್ಥಿತಿ ಹಿಮ್ಮೆಟ್ಟಿಸಲು ಸೇನೆಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಯಲ್ಲಿ ತಿಳಿಸಿತು.
ಅಸ್ಸಾಂನಲ್ಲಿ ಪರಿಸ್ಥಿತಿ ಇಷ್ಟು ಹದಗೆಡಲು ಸರ್ಕಾರವೇ ಕಾರಣ ಎಂದು ಪ್ರತಿಪಕ್ಷಗಳು ಮುಂಗಾರು ಅಧಿವೇಶನದ ಮೊದಲ ದಿನ ವಾಗ್ದಾಳಿ ನಡೆಸಿದ ನಂತರ ಸರ್ಕಾರ ಈ ಕುರಿತು ಹೇಳಿಕೆ ಪ್ರಕಟಿಸಿತು.ಈ ಗಲಭೆಗಳನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಟೀಕಿಸಿ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ನಂತರ, ಈ ಕುರಿತು ಐದು ತಾಸುಗಳ ಕಾಲ ಚರ್ಚೆ ನಡೆಯಿತು. ಅಂತಿಮವಾಗಿ ಅಡ್ವಾಣಿ ಅವರು ಮಂಡಿಸಿದ ಸೂಚನೆ ಧ್ವನಿಮತದಲ್ಲಿ ಬಿದ್ದು ಹೋಯಿತು.
ನಿಲುವಳಿ ಸೂಚನೆಗೆ ಪ್ರತಿಕ್ರಿಯಿಸಿದ ನೂತನ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ, ಅಸ್ಸಾಂನಲ್ಲಿ ನಡೆದ ಹಿಂಸಾಚಾರ ಪ್ರಕರಣಗಳ ಕುರಿತು ವಿವರ ನೀಡಿದರು. ಮೊದಲಿಗೆ, ಕೆಎಲ್ಒ ಸಂಘಟನೆಯ ಉಗ್ರವಾದಿಗಳು ನಡೆಸಿದ ದಾಳಿಯಿಂದ ಇಬ್ಬರು ಅಸುನೀಗಿದ್ದೇ ಹಿಂಸಾಚಾರ ಭುಗಿಲೇಳಲು ಕಾರಣವಾಯಿತು ಎಂದು ಅವರು ಹೇಳಿದರು.
`ಈಗ ಆ ರಾಜ್ಯದಲ್ಲಿ ಸೇನೆಯನ್ನು ಕಟ್ಟೆಚ್ಚರದ ಸ್ಥಿತಿಯಲ್ಲಿ ಇರಿಸಲಾಗಿದೆ. ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಸುಧಾರಿಸುವಂತೆ ಕಾರ್ಯ ನಿರ್ವಹಿಸಲು ಸೇನೆಗೆ ಸೂಚಿಸಲಾಗಿದೆ~ ಎಂದು ಗೃಹ ಸಚಿವರಾಗಿ ಮೊತ್ತಮೊದಲ ಬಾರಿಗೆ ಸದನದಲ್ಲಿ ಮಾತನಾಡಿದ ಶಿಂಧೆ ತಿಳಿಸಿದರು.
ಸಿಬಿಐನ ಹೆಚ್ಚುವರಿ ನಿರ್ದೇಶಕರು, ಗೃಹ ಇಲಾಖೆಯ ಈಶಾನ್ಯ ವಿಭಾಗದ ಕಾರ್ಯದರ್ಶಿಗಳ ಜತೆ ಗುರುವಾರ ಗುವಾಹಟಿಗೆ ಭೇಟಿ ನೀಡುತ್ತಾರೆ. ಅಲ್ಲಿ ಶಾಂತಿ ಮರುಸ್ಥಾಪಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತದೆ ಎಂದು ಶಿಂಧೆ ಹೇಳಿದರು.ಈ ಚರ್ಚೆಗೆ ಚಾಲನೆ ನೀಡಿದ ಅಡ್ವಾಣಿ, ಶಿಂಧೆ ಅವರ ಪ್ರತ್ಯುತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಾಂಶಗಳು
ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ
ಅಡ್ವಾಣಿ ಮಂಡಿಸಿದ ನಿಲುವಳಿ ಸೂಚನೆಗೆ ಸೋಲು
ಗುವಾಹಟಿಗೆ ಗುರುವಾರ ಸಿಬಿಐ ಅಧಿಕಾರಿಗಳ ಭೇಟಿ