ನಮ್ಮ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರು (ಡಿವಿಎಸ್) ತಮ್ಮಿಂದ ತಪ್ಪುಗಳಾದಾಗ ಎಚ್ಚರಿಸಿ ಎಂದು ಭಾಷಣಗಳಲ್ಲಿ ಹೇಳುತ್ತಿರುವುದರಿಂದ ನಾನೀಗ ಆ ಕೆಲಸವನ್ನು ಮಾಡುತ್ತಿದ್ದೆೀನೆ. ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮದ ಶಾಲೆಯ ಬೆಳ್ಳಿಹಬ್ಬದಲ್ಲಿ ದೀಪ ಬೆಳಗಿಸಿದ ಅವರು ಮುಖ್ಯಮಂತ್ರಿ ಆಗಿರುವಷ್ಟು ಕಾಲ ತನ್ನ ತಿಂಗಳ ಸಂಬಳವನ್ನು ಆ ಶಾಲೆಗೆ ನೀಡುವುದಾಗಿ ಘೋಷಿಸಿದರು. ಜನರೆಲ್ಲಾ ಚಪ್ಪಾಳೆ ತಟ್ಟಿದರು. ಎಲ್ಲರಿಗೂ ಖುಷಿಯಾಯಿತು. ಆದರೆ ಇದು ಸರಿಯೇ ಎಂಬುದೀಗ ಪ್ರಶ್ನೆ.
ಮುಖ್ಯಮಂತ್ರಿಗಳ ಸಂಬಳ ಎಷ್ಟೆಂದು ನನಗೆ ಗೊತ್ತಿಲ್ಲ. ಅದು ಎಷ್ಟೇ ಇರಲಿ, ಒಂದೇ ರೂಪಾಯಿ ಆಗಿರಲಿ. ಆದರೆ ಅವರಿಂದ ದೇಣಿಗೆ ಪಡೆಯುವುದೆಂದರೆ ಅದಕ್ಕೆ ಬೇರೆಯೇ ಗೌರವ ಇದೆ. ಇದೀಗ ಆ ಗೌರವವು ಒಂದು ಆಂಗ್ಲಮಾಧ್ಯಮ ಶಾಲೆಗೆ ಹೋಯಿತಲ್ಲಾ!
ಇದು ಸರಿಯೇ? ಅದರ ಬದಲು ಅವರು ಅದೇ ವೇದಿಕೆಯಿಂದ ಅದೇ ಸಂಸ್ಥೆ ನಡೆಸುತ್ತಿರುವ `ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ~ ಕೊಡುತ್ತೇನೆಂದಿದ್ದರೆ ಕನ್ನಡಿಗರೆಲ್ಲ ಆನಂದಿಸಬಹುದಿತ್ತು. ಕರ್ನಾಟಕದ ಆಡಳಿತದ ಚುಕ್ಕಾಣಿ ಹಿಡಿದ ಅವರು ನೀಡುವ ಒಳ್ಳೆಯ ಸಂದೇಶವಾಗುತ್ತಿತ್ತು. ಆದರೆ ನಮ್ಮ ಕರುನಾಡಿನ ಮುಖ್ಯಮಂತ್ರಿ ಕನ್ನಡದ ಕರುಳು ಹಿಂಡುತ್ತಿರುವ ಆಂಗ್ಲಮಾಧ್ಯಮಕ್ಕೆ ಶಕ್ತಿ ನೀಡುತ್ತಿರುವುದು ಎಂತಹ ವಿಪರ್ಯಾಸ! ಇದು ಎಡವಿದ್ದೇ ಅಲ್ಲವೇ?