ಹೈದರಾಬಾದ್ (ಪಿಟಿಐ): ‘ತೆಲಂಗಾಣ’ ಹೆಸರಿನಲ್ಲಿ ಅಖಂಡ ಆಂಧ್ರಪ್ರದೇಶ ರಾಜ್ಯ ವಿಭಜನೆ ಯಾಗುವುದನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಸೀಮಾಂಧ್ರ (ಕರಾವಳಿ ಆಂಧ್ರ ಹಾಗೂ ರಾಯಲ್ಸೀಮಾ ವಲಯ) ಭಾಗದ ಶಾಸಕರು ಶುಕ್ರವಾರ ತೀವ್ರ ಪ್ರತಿಭಟನೆಗೆ ಇಳಿದ ಪರಿಣಾಮ ಸದನದ ಕಲಾಪವನ್ನು ಮುಂದೂಡಬೇಕಾಯಿತು.
ಎರಡು ವಾರಗಳ ವಿರಾಮದ ತರುವಾಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಶುಕ್ರವಾರ ಸೇರಿದ್ದು, ತೆಲಂಗಾಣ ಮಸೂದೆಯ ಕುರಿತು ಚರ್ಚೆ ಕೈಗೊಳ್ಳಬೇಕಾಗಿತ್ತು.
ಕಲಾಪ ಆರಂಭವಾಗುತ್ತಲೇ ಸ್ಪೀಕರ್ ಬಳಿ ಧಾವಿಸಿದ ವೈಎಸ್ಆರ್ ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಕ್ಷಗಳ ಶಾಸಕರು ರಾಜ್ಯ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು.
ಸದಸ್ಯರ ಗದ್ದಲ ನಿಯಂತ್ರಣಕ್ಕೆ ಬಾರದೇ ಇದ್ದಾಗ ಸ್ಪೀಕರ್ ಎನ್. ಮನೋಹರ್ ಕಲಾಪವನ್ನು ಶನಿವಾರಕ್ಕೆ ಮೂಂದೂಡಿದರು.
ಜನಜೀವನ ಅಸ್ತವ್ಯಸ್ತ
ತೆಲಂಗಾಣ ಮಸೂದೆ ಕರಡು ವಿರೋಧಿಸಿ ಟಿಡಿಪಿ ಮತ್ತು ವೈ.ಎಸ್.ಆರ್ ಕಾಂಗ್ರೆಸ್ ಪಕ್ಷ ಸೇರಿದಂತೆ ಅಖಂಡ ಆಂಧ್ರ ಬೆಂಬಲಿಗರು ಶುಕ್ರವಾರ ಕರೆ ನೀಡಿದ್ದ ಒಂದು ದಿನದ ಬಂದ್ನಿಂದಾಗಿ ಕರಾವಳಿ ಆಂಧ್ರ ಮತ್ತು ರಾಯಲಸೀಮಾ ಜಿಲ್ಲೆಯ ಜನರು ತೊಂದರೆ ಅನುಭವಿಸಿದರು.