ಬೆಂಗಳೂರು: ಮಾಜಿ ಸಚಿವ ದಿವಂಗತ ಡಾ.ವಿ.ಎಸ್. ಆಚಾರ್ಯ ಹೆಸರಿನಲ್ಲಿ ಪ್ರತಿ ವಾರ್ಡ್ನಲ್ಲಿ ಆರ್ಥಿಕವಾಗಿ ಹಿಂದುಳಿದ ಅರ್ಹ 100 ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ನೀಡುವ ಯೋಜನೆ ಜತೆಗೆ ಮನೆ-ಮನೆಗಳಿಗೆ ಹಾಲು, ದಿನಪತ್ರಿಕೆ ವಿತರಿಸುವ ಅರ್ಹ ಬಡ ಮಕ್ಕಳಿಗೆ ಉಚಿತವಾಗಿ ಸೈಕಲ್ ನೀಡುವುದಕ್ಕಾಗಿ ಈ ಸಾಲಿನ ಬಜೆಟ್ನಲ್ಲಿ ಬಿಬಿಎಂಪಿ 50 ಕೋಟಿ ಮೀಸಲಿಟ್ಟಿದೆ.
ಬಡವರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಿರುವುದರಿಂದ ಅಂಥ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿ ರದ್ದಾಗಲಿದೆ ಎಂದು ಕೆಲವು ಸದಸ್ಯರು ಸಲಹೆ ನೀಡಿದ್ದರು. ಆದರೂ, ಅಡುಗೆ ಅನಿಲ ಸಂಪರ್ಕ ಬಯಸುವ ಬಡ ಕುಟುಂಬಗಳಿಗೆ ಈ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದು ಪರಿಷ್ಕೃತ ಬಜೆಟ್ಗೆ ಒಪ್ಪಿಗೆ ಪಡೆದ ನಂತರ ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್ ಸುದ್ದಿಗಾರರಿಗೆ ತಿಳಿಸಿದರು.
ಬಜೆಟ್ನಲ್ಲಿ ಮೂರು ಪಕ್ಷಗಳಿಗೆ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಸದಸ್ಯರಿಗೆ 1ರಿಂದ 5 ಕೋಟಿ ರೂಪಾಯಿವರೆಗೆ ಅನುದಾನ ಒದಗಿಸಲಾಗಿದೆ ಎಂದರು.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ. ಮುನೀಂದ್ರಕುಮಾರ್ ತಮ್ಮ ವಾರ್ಡ್ಗೆ 67 ಕೋಟಿ ರೂಪಾಯಿ ಅನುದಾನ ಪಡೆದಿರುವ ಬಗ್ಗೆ ಬ್ಯಾಟರಾಯನಪುರ ವಾರ್ಡ್ ಸದಸ್ಯೆ ಇಂದಿರಾ ಆರೋಪಿಸಿರುವ ಕುರಿತು ಗಮನಸೆಳೆದಾಗ, `ಮುನೀಂದ್ರಕುಮಾರ್ ಅವರು ಕೇವಲ 19 ಕೋಟಿ ರೂಪಾಯಿ ಅನುದಾನ ಪಡೆದಿದ್ದಾರೆ.
ಸದಸ್ಯೆ ಇಂದಿರಾ ಅವರ ವಾರ್ಡ್ಗೂ ಹೆಚ್ಚುವರಿಯಾಗಿ 2 ಕೋಟಿ ಅನುದಾನ ಒದಗಿಸಲಾಗಿದೆ~ ಎಂದರು. `ತುರ್ತು ಕಾಮಗಾರಿಗಳಾಗಿ ಬಜೆಟ್ನಲ್ಲಿ 99 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮೇಯರ್, ಆಯುಕ್ತರು ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಚರ್ಚಿಸಿ ತುರ್ತು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ~ ಎಂದರು.
`150 ಕೋಟಿ ರೂಪಾಯಿಗಳ ಮೇಯರ್ ನಿಧಿ ಹಾಗೂ 25 ಕೋಟಿ ರೂ. ಉಪ ಮೇಯರ್ ನಿಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಎಲ್ಲ ಸದಸ್ಯರಿಗೂ ತಾರತಮ್ಯ ಮಾಡದಂತೆ ನೆರವು ನೀಡಲು ಮೇಯರ್ ಹಾಗೂ ಉಪ ಮೇಯರ್ ಅವರನ್ನು ಕೋರಲಾಗಿದೆ~ ಎಂದು ಅವರು ತಿಳಿಸಿದರು.
`ಸ್ವಾತಂತ್ರ್ಯ ಉದ್ಯಾನದ ಬಳಿ ನಿರ್ಮಿಸಲು ಉದ್ದೇಶಿಸಿದ್ದ ಪಾಲಿಕಾ ಬಜಾರ್ ಅನ್ನು ನಗರದ ಹೊರವಲಯದ ಸೂಕ್ತ ಸ್ಥಳದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ~ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.