ನವದೆಹಲಿ (ಪಿಟಿಐ): ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯನ್ನು ಮತ್ತೆ ಮುಂದೂಡಲಾಗಿದ್ದು, ಜುಲೈ 22 ರಂದು ನಡೆಸಲು ನಿರ್ಧರಿಸಲಾಗಿದೆ.
ಈ ಮೊದಲು ತೀರ್ಮಾನಿಸಿದಂತೆ ಹರಾಜು ಜೂನ್ 30 ರಂದು ನಡೆಯಬೇಕಿತ್ತು. ಆ ಬಳಿಕ ಹರಾಜನ್ನು ಜುಲೈ 19 ರಂದು ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಮತ್ತೆ ಮೂರು ದಿನಗಳ ಮಟ್ಟಿಗೆ ಮುಂದೂಲಾಗಿದೆ.
ಕೆಲವು ಫ್ರಾಂಚೈಸ್ಗಳ ಕೋರಿಕೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಬಿಎಲ್ ಸಂಘಟಕರು ಹೇಳಿದ್ದಾರೆ. `ಐಬಿಎಲ್ ಆಟಗಾರರ ಹರಾಜಿಗೆ ಮುನ್ನ ಎರಡು ದಿನಗಳ ಕಾರ್ಯಾಗಾರ ನಡೆಸಬೇಕೆಂದು ಫ್ರಾಂಚೈಸ್ಗಳು ಕೋರಿದ್ದವು. ಐಬಿಎಲ್ ಆಡಳಿತ ಮಂಡಳಿ ಈ ಕೋರಿಕೆಗೆ ಸಮ್ಮತಿ ಸೂಚಿಸಿದೆ.
ಷೇರು ಖರೀದಿಸಿದ ಗಾವಸ್ಕರ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಮತ್ತು ತೆಲುಗು ನಟ ನಾಗಾರ್ಜುನ ಅವರು ಐಬಿಎಲ್ನ ಮುಂಬೈ ಫ್ರಾಂಚೈಸ್ನ ಷೇರು ಖರೀದಿಸಿದ್ದಾರೆ. ಮುಂಬೈನ ತಂಡಕ್ಕೆ `ಮುಂಬೈ ಮಾಸ್ಟರ್ಸ್' ಎಂದು ಹೆಸರಿಡಲಾಗಿದೆ.
`ಬ್ಯಾಡ್ಮಿಂಟನ್ ಜೊತೆ ಭಾಗಿಯಾಗಲು ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿ' ಎಂದು ಗಾವಸ್ಕರ್ ಪ್ರತಿಕ್ರಿಯಿಸಿದ್ದಾರೆ.