ಚಿತ್ರದುರ್ಗ: ಬಿಜೆಪಿ ಸರ್ಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ಜನತಾ ಪಕ್ಷದ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಿಂದ ಬಿ.ಡಿ. ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಜಾರಿಗೆ ತಂದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ಹಾಗೂ ವೃದ್ಧಾಪ್ಯ ವೇತನ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ. ಸುವರ್ಣ ಭೂಮಿ ಯೋಜನೆ ಸ್ಥಗಿತಗೊಂಡಿದೆ. ಹಾಲು ಉತ್ಪಾದಕ ಸಹಕಾರ ಸಂಘ ರೈತರಿಗೆ ಪ್ರತಿ ಲೀಟರ್ಗೆ ಪ್ರೋತ್ಸಾಹ ಧನವಾಗಿ ನೀಡುತ್ತಿದ್ದ 2 ರೂಪಾಯಿಗಳನ್ನು ನೀಡುತ್ತಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರ ಇಂದು ಅನೇಕ ಯೋಜನೆಗಳಲ್ಲಿ ಫಲಾನುಭವಿಗಳಿಗೆ ನೀಡಬೇಕಾದ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವುದರಿಂದ ರಾಜ್ಯ ಪಾಲರು ಇತ್ತ ಗಮನಹರಿಸಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವ ಮೂಲಕ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕೆಜೆಪಿ ಜಿಲ್ಲಾ ಘಟಕದ ಸಂಚಾಲಕ ಜಿ.ಸಿ. ರೇವಣಸಿದ್ದಪ್ಪ, ರಾಜ್ಯ ಘಟಕದ ಕಾರ್ಯದರ್ಶಿ ಎಂ. ಜಗದೀಶ್, ಚಳ್ಳಕೆರೆ ಎಂ. ತಿಪ್ಪೇಸ್ವಾಮಿ, ಹೊಳಲ್ಕೆರೆಯ ಆನಂದ್ಮೂರ್ತಿ, ಶಿವಪುತ್ರಪ್ಪ, ಜಿತೇಂದ್ರ, ನಾಗರಾಜ್ ಬೇದ್ರೆ, ವೆಂಕಟೇಶ್, ಮೋಹನ್ಕುಮಾರ್, ಶಾಂತಮ್ಮ, ನಾಗರತ್ನಮ್ಮ, ಅಬ್ದುಲ್, ಕೆ. ಬಾಬು, ಜಮೀರ್, ಎಚ್. ಮಂಜುನಾಥ್, ಶಂಕರ್, ಮಂಜುನಾಥ್, ಎಚ್.ಎಸ್. ಗಣೇಶ್, ಮಧುರಿ ಗಿರೀಶ್, ಚಂದ್ರಮ್ಮ, ಶಕುಂತಲಮ್ಮ, ಶೌಕತ್, ಜಯಣ್ಣ, ಬಿ. ಪರಮೇಶ್, ಎಸ್. ನಾಗರಾಜ್, ದ್ಯಾಮೇಶ್, ಪವನ್ ಪಾಲ್ಗೊಂಡಿದ್ದರು.