ಶಿವಮೊಗ್ಗ:ಶಿಕ್ಷಕರಿಗೆ ಆಡಳಿತದ ಅನುಭವ ನೀಡುವ ದೃಷ್ಟಿಯಿಂದ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎರಡು ವಿಶೇಷ ಸ್ನಾತಕೋತ್ತರ ಕೋರ್ಸ್ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಎಸ್.ಎ. ಬಾರಿ ತಿಳಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.ಬಹಳಷ್ಟು ಶಿಕ್ಷಕರಿಗೆ ಆಡಳಿತದ ಅನುಭವ ಇಲ್ಲ. ಈ ಕೊರತೆಯನ್ನು ಮನಗಂಡ ವಿಶ್ವವಿದ್ಯಾಲಯ ಇತ್ತೀಚಿನ ಸಿಂಡಿಕೇಟ್ ಸಭೆಯಲ್ಲಿ ‘ಶಿಕ್ಷಣದ ಆಡಳಿತ ಮತ್ತು ನಿರ್ವಹಣೆ’ ಹಾಗೂ ‘ಸ್ನಾತಕೋತ್ತರ ವಿಶೇಷ ಸಮಗ್ರ ಶಿಕ್ಷಣ’ ಎಂಬ ಎರಡು ಕೋರ್ಸ್ ಅಳವಡಿಸಲು ನಿರ್ಧರಿಸಲಾಗಿದೆ ಎಂದರು.
ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅಜೀಂ ಪ್ರೇಮ್ಜಿ ಫೌಂಡೇಷನ್ ಮುಂದಾಗಿದೆ ಎಂದು ನುಡಿದರು.ಸಮಾರಂಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಪ್ರೊ. ಜೆ.ಎಲ್. ಪದ್ಮನಾಭ್, ನಿರ್ದೇಶಕರಾದ ಕೆ.ಜಿ.ಪ್ರಫುಲ್ಲಚಂದ್ರ, ಮಾದೇಶ ಹೆಗ್ಡೆ, ಪುಟ್ಟಸ್ವಾಮಿ, ಕೊರಡಿ ಉಪೇಂದ್ರ ಉಪಸ್ಥಿತರಿದ್ದರು. ಪ್ರಾಮಶುಪಾಲರಾದ ಜೆ.ಶಾಲಿನಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎನ್.ಜೆ. ಪ್ರಕಾಶ್ ಸ್ವಾಗತಿಸಿದರು. ಕೆ.ಎಸ್. ವೀಣಾ ಪರಿಚಯಿಸಿದರು.