ಮರಿಯಮ್ಮನಹಳ್ಳಿ: ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮಹಿಳೆಯರಿಗೆ ಸ್ವಸಹಾಯ ಸಂಘಗಳು ದಾರಿದೀಪಗಳಾಗಿವೆ. ಸ್ವಸಹಾಯ ಸಂಘಗಳ ನೆರವಿನೊಂದಿಗೆ ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು ಎಂದು ಮೈರಾಡ ಸಂಸ್ಥೆಯ ಯೋಜನಾಧಿಕಾರಿ ನಟರಾಜ್ ಸಲಹೆ ನೀಡಿದರು.
ದುರ್ಗಾದಾಸ ಕಲಾಮಂದಿರದಲ್ಲಿ ವಿಶ್ವಕರ್ಮ ಮಹಿಳಾ ಸ್ವಸಹಾಯ ಸಂಘ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾರೆ. ಗ್ರಾಮೀಣ ಮಹಿಳೆಯರು ಹಿಂಜರಿಕೆ ಬಿಟ್ಟು ಮುಂದೆ ಬರಬೇಕಿದೆ. ಶಿಕ್ಷಣ ಪಡೆಯುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕಿ ಬಿ. ಪಾರ್ವತಮ್ಮ, ಮಹಿಳೆಯರು ತಮ್ಮಿಂದ ಏನೂ ಆಗದು ಎಂದು ಕೈಚೆಲ್ಲಿ ಕುಳಿತುಕೊಳ್ಳಬಾರದು. ಆತ್ಮಸ್ಥೈರ್ಯದಿಂದ ಮುನ್ನಗ್ಗಬೇಕು ಎಂದರು.
ವಿಶೇಷ ಅತಿಥಿ ಜರ್ಮನಿಯ ವಿದ್ಯಾರ್ಥಿನಿ ಸಾರಾ, ತುಂಗಭದ್ರ ಸಂಪನ್ಮೂಲ ಕೇಂದ್ರ ಚನ್ನವೀರಯ್ಯಸ್ವಾಮಿ, ಲಲಿತಮ್ಮ, ಬಸಮ್ಮ, ಪ್ರತಿಭಾ ಮಹಿಳಾ ವಿವಿಧೋದ್ದೇಶ ಸಂಘದ ಉಪಾಧ್ಯಕ್ಷೆ ಶಾರದಮ್ಮ ಮಾತನಾಡಿದರು.
ಸಂಘದ ಸದಸ್ಯರಾದ ಕಸ್ತೂರಮ್ಮ, ಕಾಳಮ್ಮ, ಜಯಮ್ಮ, ಗೀತಾ, ಲಲಿತಾ, ದಾಕ್ಷಾಯಣಿ, ಶಕುಂತಲ ಅನಿಸಿಕೆ ಹಂಚಿಕೊಂಡರು. ಲಲಿತಮ್ಮ ಸಂಘದ ವಾರ್ಷಿಕ ವರದಿ ವಾಚಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗುತಿ ಹಾಜರಿದ್ದರು. ಕಸ್ತೂರಮ್ಮ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಅಕ್ಕಮಹಾದೇವಿ ವಂದಿಸಿದರು. ಗೀತಾ ಸ್ವಾಗತಿಸಿದರು.