ಕೋಲಾರ:ಆದಿಮ ಸಾಂಸ್ಕೃತಿಕ ಸಂಘಟನೆ ಸಮುದಾಯ ಪರವಾದ ಸಿನಿಮಾ ನಿರ್ಮಿಸಲು ಉದ್ದೇಶಿಸಿದೆ ಎಂದು ಸಂಘಟನೆ ಅಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ನಗರ ಹೊರವಲಯದ ತೇರಳ್ಳಿ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಸಂಘಟನೆ ಆವರಣದಲ್ಲಿ ಈಚೆಗೆ ನಡೆದ 69ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ವಿಜ್ಞಾನ ಸಂವಹನಕಾರ ಪ್ರಶಸ್ತಿಗೆ ಆಯ್ಕೆಯಾಗಿರುವ ವಿ.ಎಸ್.ಎಸ್ಶಾಸ್ತ್ರಿಯನ್ನು ಸನ್ಮಾನಿಸಿ ಮಾತನಾಡಿದ ಅವರು, ಸಂಘಟನೆ ಕಾರ್ಯಚಟುವಟಿಕೆಗೆ ಹಣ ಹೊಂದಿಸಲು ಸಿನಿಮಾ ನಿರ್ಮಿಸುವುದೇ ದಾರಿ. ಕತೆ, ಚಿತ್ರಕತೆ ರಚಿಸಲಾಗುತ್ತಿದೆ. ಸಂಘಟನೆಯ ಯುವಕ-ಯುವತಿಯರೇ ಅಭಿನಯಿಸಲಿದ್ದಾರೆ ಎಂದರು.
ಬಸವಣ್ಣನಾಗಿ: ವಿಜ್ಞಾನ ಮತ್ತು ಗಣಿತ ಸಂವಹನಕ್ಕೆ ಅಗತ್ಯ ತರಬೇತಿಯನ್ನು ಶಿಕ್ಷಕರಿಗೆ ನೀಡುತ್ತಿರುವ ಶಾಸ್ತ್ರಿಯವರು ಸಮುದಾಯದ ಮಧ್ಯೆ ಬಸವಣ್ಣನಂತೆ ಆಗಬೇಕು. ಆಗ ಅವರ ತಿಳಿವಳಿಕೆಯ ಪ್ರಯೋಜನವಾಗುತ್ತದೆ ಎಂದರು.
ನಂತರ ಡಾ.ಎಂ.ಬೈರೇಗೌಡ ರಚಿಸಿರುವ `ವೇಷದ ಹುಲಿ~ ನಾಟಕವನ್ನು ಬೆಂಗಳೂರಿನ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಲಾವಿದರು ಅಭಿನಯಿಸಿದರು. ರಾಜಗುರು ಹೊಸಕೋಟೆ ನಿರ್ದೇಶಿಸಿ ಸಂಗೀತ ಸಂಯೋಜಿಸಿದ್ದರು.
ನ್ಯಾಯಾಧೀಶ ವೀರಣ್ಣ ಜಿ.ತಿಗಡಿ, ಲೇಖಕ ಚಂದ್ರಶೇಖರ ಐಜೂರು, ಜಾನಕಿ ರಾಮನ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ವ್ಯವಸ್ಥಾಪಕ ವಾಸು ಇದ್ದರು. ಗೋವಿಂದಪ್ಪ ನಿರೂಪಿಸಿದರು.