ಹಗರಿಬೊಮ್ಮನಹಳ್ಳಿ: ಗರ್ಭಿಣಿಯನ್ನು ಬೆಂಕಿ ಹಚ್ಚಿ ಅಮಾನುಷವಾಗಿ ಹತ್ಯೆ ಮಾಡಿರುವ ಪ್ರಕರಣ ದಾಖಲಿಸಲು ಕರ್ತವ್ಯಲೋಪ ಮಾಡಿರುವ ಪೊಲೀಸರ ವರ್ತನೆಯನ್ನು ಖಂಡಿಸಿ ಬುಧವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಇಲ್ಲಿಯ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಮಹಿಳೆಯ ಕೊಲೆಯಲ್ಲಿ ಭಾಗಿಯಾದ ಆರೋಪಿಗಳಾದ ಅತ್ತೆ, ಭಾವನನ್ನು ಪೊಲೀಸರು ಬಂಧಿಸದೆ ರಕ್ಷಣೆಗೆ ಮುಂದಾಗಿದ್ದಾರೆ. ಆಸ್ತಿಗಾಗಿಯೇ ಕೊಲೆ ಘಟನೆ ನಡೆದಿದೆ ಎಂಬುದು ಸ್ಪಷ್ಟವಾಗಿದ್ದರೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೇಟು ಹಾಕುತ್ತಿರುವುದು ದುರಾದೃಷ್ಟಕರ ಎಂದು ಪ್ರತಿಭಟನಾಕಾರರು ಹೇಳಿದರು.
ಕೊಲೆಯಾದ ಗರ್ಭಿಣಿ ಯೋಗೇಶ್ವರಿ ಸೋದರ ಮಾವ ಉಪ್ಪಾರ ಶಂಕ್ರಪ್ಪ ಮಾತನಾಡಿ, ಯೋಗೇಶ್ವರಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡು ಮಕ್ಕಳಾಗಲಿಲ್ಲವೆಂದು ಹಿಂಸಿಸಿ ಕೊಲೆ ಮಾಡಲಾಗಿದೆ ಎಂದು ದೂರಿದ್ದಾರೆ.
ಯೋಗೇಶ್ವರಿಯ ಪತಿ ಟಿ. ಅನಿಲ್ಕುಮಾರ್ ಅವರ ಅಣ್ಣ ಟಿ. ಬಾಲಕೃಷ್ಣ ಆಸ್ತಿಗಾಗಿ ಸಂಚು ನಡೆಸಿದ್ದರು. ಯೋಗೇಶ್ವರಿಯ ಅತ್ತೆ ಸರ್ವಮಂಗಳಮ್ಮ, ಭಾವ ಬಾಲಕೃಷ್ಣ ಅವರು ಡಿ. 18ರಂದು ಯೋಗೇಶ್ವರಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಬಿ. ಮಾಳಮ್ಮ , ಮುಖಂಡರಾದ ಬಿ. ಯಂಕಮ್ಮ, ಚಾಂದಬೀ, ಜಿ. ಸರೋಜಾ, ಜಿ.ಆರ್. ಮಲ್ಲಮ್ಮ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಯೋಗೇಶ್ವರಿಯ ತಾಯಿ ಉಪ್ಪಾರ ಲಕ್ಷ್ಮಮ್ಮ ಮತ್ತು ಸಹೋದರ ಉಪ್ಪಾರ ವೆಂಕಟೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.