ಬೆಂಗಳೂರು: ನಗರದ ಎನ್.ಆರ್.ಚೌಕದಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಘಟಕದಲ್ಲಿ ಜ್ಯೋತಿ ಎಂಬುವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಹೋಲುವ ವ್ಯಕ್ತಿಯೊಬ್ಬನನ್ನು ಆಂಧ್ರಪ್ರದೇಶದ ಕದಿರಿ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
‘ವಶಕ್ಕೆ ತೆಗೆದುಕೊಂಡಿರುವ ವ್ಯಕ್ತಿಹೆಸರು ನಾರಾಯಣರೆಡ್ಡಿ. ಅನಂತಪುರ ಜಿಲ್ಲೆ ಕದಿರಿ ಸಮೀಪದ ಚೆರುವುಲ ವಾಡಾಪಲ್ಲಿ ಗ್ರಾಮದಲ್ಲಿ ವಾಸವಿರುವ ಶಿವರೆಡ್ಡಿ ,ಲಲಿತಮ್ಮ ದಂಪತಿಯ ಮಗ’ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಆತನ ಚಹರೆ ಜ್ಯೋತಿ ಅವರ ಮೇಲೆ ಹಲ್ಲೆ ನಡೆಸಿದ್ದ ದುಷ್ಕರ್ಮಿಯ ಚಹರೆಯನ್ನು ಹೋಲುವಂತಿದೆ. ಆದ್ದರಿಂದ ಕದಿರಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆಂಧ್ರಪ್ರದೇಶದಲ್ಲಿರುವ ನಗರದ ಸಿಬ್ಬಂದಿ ನಾರಾಯಣರೆಡ್ಡಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಪ್ರಕರಣದ ಆರೋಪಿಯಲ್ಲ ಎಂದು ಗೊತ್ತಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ನಾರಾಯಣರೆಡ್ಡಿ, ವಾಪಸ್ ಬಂದಿರಲಿಲ್ಲ ಎಂದು ಶಿವರೆಡ್ಡಿ ದಂಪತಿ ಹೇಳಿಕೆ ಕೊಟ್ಟಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಪರಾಧ ಹಿನ್ನೆಲೆಯುಳ್ಳ ನಾರಾಯಣರೆಡ್ಡಿ ವಿರುದ್ಧ ಆಂಧ್ರಪ್ರದೇಶದ ಹಲವು ಠಾಣೆಗಳಲ್ಲಿ ಕೊಲೆ, ದರೋಡೆ ಮತ್ತಿತರ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ, ಆತನನ್ನು ಸ್ಥಳೀಯ ಪೊಲೀಸರು ಈ ಹಿಂದೆಯೇ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ ಎಂದು ಹೇಳಿದ್ದಾರೆ.