ಆಲಮಟ್ಟಿ: ಮಹಾರಾಷ್ಟ್ರದಿಂದ ತಮಿಳುನಾಡಿಗೆ ಹತ್ತಿ ಸಾಗಿಸುತ್ತಿದ್ದ ತಮಿಳುನಾಡು ಮೂಲದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಘಟನೆ ಇಲ್ಲಿಗೆ ಸಮೀಪದ ನಿಡಗುಂದಿಯ ರಾಷ್ಟ್ರೀಯ ಹೆದ್ದಾರಿ 13ರ ಮುದ್ದೇಬಿಹಾಳ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ.ಮಹಾರಾಷ್ಟ್ರದ ಜಾಲ್ನಾದಿಂದ ತಮಿಳುನಾಡಿನ ಕೊಯಮುತ್ತೂರಿಗೆ ಲಾರಿಯಲ್ಲಿ ಹತ್ತಿ ಸಾಗಿಸಲಾಗುತ್ತಿತ್ತು.
ಗೋನಾಳ ಸಮೀಪ ಲಾರಿಗೆ ಬೆಂಕಿ ತಗುಲಿದೆ. ಕೆಲ ಕಿ.ಮೀ ನಂತರ ಬೆಂಕಿ ಹತ್ತಿಕೊಂಡಿದ್ದು ಲಾರಿ ಚಾಲಕನಿಗೆ ಗೊತ್ತಾಗಿದ್ದು, ನಿಡಗುಂದಿ ಬಳಿ ಲಾರಿ ನಿಲ್ಲಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾನೆ. ಹಳ್ಳಿಯ ಜನರೂ ಬೆಂಕಿ ನಂದಿಸಲು ಸಹಕರಿಸಿದ್ದಾರೆ.ಲಾರಿಗೆ ತಗುಲಿದ ಬೆಂಕಿಯಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಭಸ್ಮವಾಗಿದೆ. ಲಾರಿ ಸೇರಿದಂತೆ ಒಟ್ಟಾರೇ ಸುಮಾರು 25 ಲಕ್ಷ ರೂಪಾಯಿ ಹಾನಿಯಾಗಿದೆ ಎಂದು ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ. ನಿಡಗುಂದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ: ಸಾವು
ವಿಜಾಪುರ: ಸಿಂದಗಿ ತಾಲ್ಲೂಕು ದೇವರ ಹಿಪ್ಪರಗಿ ಹತ್ತಿರ ಕಾರು ಪಲ್ಟಿಯಾಗಿ ಗುಲ್ಬರ್ಗದ ಅಬ್ದುಲ್ಹೈ ಮೊಹ್ಮದಹುಸೇನ ಮಿರಾಜುದಾರ (65) ಎಂಬವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ದೇವರ ಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.