ಕೋಲ್ಕತ್ತ (ಪಿಟಿಐ): ರಾಜ್ಯ ಸರ್ಕಾರದ ಮೇಲ್ವಿಚಾರಣೆಯ ಬಿ.ಸಿ. ರಾಯ್ ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ಮತ್ತೆರಡು ಶಿಶುಗಳು ಅಸುನೀಗಿದ್ದು ಕಳೆದ ಮೂರು ದಿನಗಳಿಂದ ಇಲ್ಲಿ ಸಾವಿಗೀಡಾದ ಮಕ್ಕಳ ಸಂಖ್ಯೆ 13ಕ್ಕೆ ಏರಿದೆ. ಇದೇ ಆಸ್ಪತ್ರೆಯಲ್ಲಿ ಜೂನ್ ತಿಂಗಳಲ್ಲಿ ಎರಡು ದಿನಗಳಲ್ಲಿ 18 ಶಿಶುಗಳು ಕೊನೆಯುಸಿರೆಳೆದಿದ್ದರು.
ಈ ಶಿಶುಗಳ ಸಾವು ಆಸ್ಪತ್ರೆಯ ವೈದ್ಯರ ಕಾಳಜಿ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ. ಮಕ್ಕಳ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಪೋಷಕರು ಎಂದು ದೂರಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯಾಧಿಕಾರಿಗಳು `ಇದರಲ್ಲಿ ಅಸಾಮಾನ್ಯ ಎನಿಸುವಂಥದ್ದು ಏನಿಲ್ಲ~. ಏಕೆಂದರೆ ಮಕ್ಕಳನ್ನು `ಅತಿ ಗಂಭೀರ~ ಸ್ಥಿತಿಯಲ್ಲಿ ಇಲ್ಲಿಗೆ ಕರೆತರಲಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಪ್ರಕರಣಗಳಲ್ಲಿ ವೈದ್ಯರ ನಿರ್ಲಕ್ಷ್ಯ ಇಲ್ಲ ಅಥವಾ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಯಾವುದೇ ಲೋಪ ಆಗಿಲ್ಲ ಎಂದು ರಾಜ್ಯ ಸರ್ಕಾರ ಸಮರ್ಥನೆ ನೀಡಿದೆ.
ಶಿಶುಗಳ ಸಾವಿನ ಬಗ್ಗೆ ತನಿಖೆ ನಡೆಸಿ ಆಸ್ಪತ್ರೆಯವರೇ ಸರ್ಕಾರಕ್ಕೆ ಈಚೆಗೆ ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಸರ್ಕಾರ ಈ ಪ್ರಕರಣಗಳಲ್ಲಿ ಆಸ್ಪತ್ರೆಯ ದೋಷ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದೆ.
`ನಮಗೆ ಸಲ್ಲಿಸಿದ ವರದಿ ಪರಿಶೀಲಿಸಿದ ಬಳಿಕವೂ ಯಾವುದೇ ಲೋಪ ಅಥವಾ ವೈದ್ಯಕೀಯ ನಿರ್ಲಕ್ಷ ಕಂಡು ಬಂದಿಲ್ಲ~ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶಕ ಸುಶಾಂತ ಬ್ಯಾನರ್ಜಿ ಹೇಳಿದ್ದಾರೆ.
`ಪ್ರತಿ ದಿನ ಆಸ್ಪತ್ರೆಗೆ 300 ಮಕ್ಕಳು ದಾಖಲಾಗುತ್ತಾರೆ. ಈ ಪೈಕಿ ಸರಾಸರಿ ಐದು ಮಕ್ಕಳು ಸಾವಿಗೀಡಾಗುತ್ತವೆ. ಇದು ಅಸಹಜವೇನಲ್ಲ. ಬಹುತೇಕ ಪ್ರಕರಣಗಳಲ್ಲಿ ಮಕ್ಕಳ ಸ್ಥಿತಿ ಚಿಂತಾಜನಕವಾಗಿರುತ್ತದೆ~ ಎಂದು ಆಸ್ಪತ್ರೆಯ ಅಧೀಕ್ಷಕ ದಿಲೀಪ್ ಪಾಲ್ ತಿಳಿಸಿದ್ದಾರೆ.