ಬೆಂಗಳೂರು: ಭಾರತ ಟೆನ್ಪಿನ್ ಬೌಲಿಂಗ್ ಫೆಡರೇಷನ್ (ಟಿಬಿಎಫ್) ಆಶ್ರಯದಲ್ಲಿ ಬೆಂಗಳೂರಿನಲ್ಲಿ ಇಂದಿನಿಂದ 25ನೇ ರಾಷ್ಟ್ರೀಯ ಟೆನ್ಪಿನ್ ಬೌಲಿಂಗ್ ಚಾಂಪಿಯನ್ಷಿಪ್ ನಡೆಯಲಿದೆ.
ಒರಾಯನ್ ಮಾಲ್ನಲ್ಲಿರುವ ‘ಬ್ಲೂ ಒ’ ಬೌಲಿಂಗ್ ಸೆಂಟರ್ನಲ್ಲಿ ಆರು ದಿನಗಳ ಕಾಲ ನಡೆಯುವ ಚಾಂಪಿಯನ್ಷಿಪ್ನಲ್ಲಿ 12 ರಾಜ್ಯಗಳ ಒಟ್ಟು 114 ಸ್ಪರ್ಧಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುವರು.
‘ಪುರುಷರ ವಿಭಾಗದಲ್ಲಿ ಕರ್ನಾಟಕದ 16 ಸ್ಪರ್ಧಿಗಳು ಹಾಗೂ ಮಹಿಳೆಯರ ವಿಭಾಗದಲ್ಲಿ ಆರು ಸ್ಪರ್ಧಿಗಳು ಕಣದಲ್ಲಿದ್ದಾರೆ. ಈ ಬಾರಿ ಒಟ್ಟು ಬಹುಮಾನ ಮೊತ್ತವನ್ನು ₨ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ’ ಎಂದು ಟಿಬಿಎಫ್ ಕಾರ್ಯದರ್ಶಿ ಆರ್. ಕಣ್ಣನ್ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಲಿ ಚಾಂಪಿಯನ್ಗಳಾದ ದೆಹಲಿಯ ಧ್ರುವ್ ಸರ್ದಾ ಮತ್ತು ತಮಿಳುನಾಡಿನ ಸಬೀನಾ ಅವರು ಈ ಬಾರಿಯೂ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ಸಬೀನಾ ತಮ್ಮ ಎಂಟನೇ ರಾಷ್ಟ್ರೀಯ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕದ ಆಕಾಶ್ ಅಶೋಕ್ ಕುಮಾರ್, ವಿಜಯ್ ಪಂಜಾಬಿ, ಪರ್ವೇಜ್ ಅಹ್ಮದ್ ಹಾಗೂ ಪಿ. ವಿವೇಕ್ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.
‘25ನೇ ವರ್ಷದ ಟೂರ್ನಿ ನಡೆಸುತ್ತಿರುವುದು ಸಂತಸದ ವಿಷಯ. ಪ್ರಾಯೋಜಕರ ನೆರವಿನಿಂದಾಗಿ ಟೆನ್ಪಿನ್ ಬೌಲಿಂಗ್ ಇಂದು ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವಂತಹ ಸ್ಪರ್ಧಿಯನ್ನು ತಯಾರುಗೊಳಿಸುವುದು ನಮ್ಮ ಉದ್ದೇಶ’ ಎಂದು ಟಿಬಿಎಫ್ ಅಧ್ಯಕ್ಷ ಕಾರ್ತಿ ಪಿ. ಚಿದಂಬರಂ ಹೇಳಿದರು.
ಪುರುಷರ ಮತ್ತು ಮಹಿಳೆಯರ ವಿಭಾಗದ ಎಲ್ಲ ಸ್ಪರ್ಧಿಗಳು ಲೀಗ್ ಹಂತದಲ್ಲಿ ಆಡಲಿದ್ದಾರೆ. ಮೊದಲ ನಾಲ್ಕು ಸ್ಥಾನ ಪಡೆಯುವವರು ನಾಕೌಟ್ ಹಂತ ಪ್ರವೇಶಿಸುವರು.