ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಸಂಸತ್‌ ಚಳಿಗಾಲ ಅಧಿವೇಶನ

ಪಂಚ ರಾಜ್ಯಗಳ ವಿಧಾನಸಭಾ ಚುನಾ­ವಣಾ ಫಲಿತಾಂಶದ ಪರಿಣಾಮ ನಿರೀಕ್ಷೆ
Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ಪಂಚ ರಾಜ್ಯಗಳ ವಿಧಾನ­ಸಭಾ ಚುನಾ­ವಣೆ ಫಲಿತಾಂಶ ಗುರು­ವಾರ­­ದಿಂದ ಆರಂಭವಾಗುವ ಸಂಸತ್ತಿನ ಚಳಿಗಾಲ ಅಧಿವೇಶನದ ದಿಕ್ಕುದೆಸೆ ನಿರ್ಧರಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಕಲಾಪ ಕಾರ್ಯ­ಸೂಚಿ ಸಿದ್ಧಪಡಿಸುತ್ತಿದ್ದರೂ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆ ಸಂಸತ್ತಿನ ಲ್ಲಿ ಮಂಡನೆ ಆಗುವುದೇ ಎಂಬು­ದು ಸ್ಪಷ್ಟವಾಗಿಲ್ಲ. ಆದರೆ, ಪ್ರಧಾನಿ ಮನಮೋಹನ್‌ಸಿಂಗ್‌ ತೆಲಂಗಾ­ಣ ರಾಜ್ಯ ರಚನೆಗೆ ಸರ್ಕಾರ ಬದ್ಧ ಎಂದಿದ್ದಾರೆ.

ಶ್ರೀಸಾಮಾನ್ಯನ ಜೇಬಿಗೆ ಹೊರೆ­ಯಾ ಗಿ­­ರುವ ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮೊದಲ ದಿನದಿಂದಲೇ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ಸಜ್ಜಾಗುತ್ತಿವೆ. ಈ ವಿಷಯ­ದಲ್ಲಿ ನಿಲುವಳಿ ಸೂಚನೆ ಮಂಡಿಸಲು ಬಿಜೆಪಿ ಮತ್ತು ಎಡಪಕ್ಷಗಳು ತಯಾರಿ ನಡೆಸಿವೆ.

ಸರ್ಕಾರ ಪಟ್ಟಿ ಮಾಡಿರುವ 38 ಮಸೂದೆಗಳಲ್ಲಿ ತೆಲಂಗಾಣ ರಾಜ್ಯದ ಮಸೂದೆ ಇಲ್ಲ. ಆದರೆ, ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಾಗಿ ಸರ್ಕಾರ ಭರವ­ಸೆ ನೀಡಿದೆ. ತೆಲಂಗಾಣ ಕರಡು ಮಸೂದೆ­ಯನ್ನು ಸಿದ್ಧಪಡಿಸುವ ಕೆಲಸದಲ್ಲಿ ಸಚಿವರ ತಂಡ ಮಗ್ನವಾಗಿದೆ. ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಬಳಿಕ ರಾಷ್ಟ್ರ­ಪತಿಗಳು ಇದನ್ನು ಆಂಧ್ರ ವಿಧಾನ ಮಂಡ­ಲ­ದ ಅಂಗೀಕಾರಕ್ಕೆ ಕಳುಹಿಸಲಿದ್ದಾರೆ.

ಈಗಾಗಲೇ ಒಂದು ಸದನದಲ್ಲಿ ಅಂಗೀಕಾರ ಪಡೆದ ಮಹಿಳಾ ಮೀಸಲು ಮತ್ತು ಲೋಕಪಾಲ ಮಸೂದೆಯನ್ನು ಮತ್ತೊಂದು ಸದನದಲ್ಲಿ ಮಂಡಿಸು­ವುದು ತನ್ನ ಆದ್ಯತೆಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಚಳಿಗಾಲ ಅಧಿವೇಶನ ಗುರುವಾರ­ದಿಂದ ಆರಂಭ ಆದರೂ ಸೋಮವಾರ­ದವರೆಗೆ ಕಲಾಪ ನಡೆಯುವುದು ಅನು­ಮಾನ.

ಈಚೆಗೆ ನಿಧನರಾದ ಲೋಕಸಭೆ ಬಿಜೆಪಿ ಸದಸ್ಯ ಮುರಾರಿಲಾಲ್‌ ಸಿಂಗ್‌, ರಾಜ್ಯಸಭೆ ಎಸ್‌ಪಿ ಸದಸ್ಯ ಮೋಹನ್‌­ಸಿಂಗ್‌ ಅವರಿಗೆ ಸಂತಾಪ ಸೂಚಿಸಿದ ಬಳಿಕ ಉಭಯ ಸದನಗಳು ಶುಕ್ರವಾರಕ್ಕೆ ಮುಂದಕ್ಕೆ ಹೋಗಲಿವೆ. ಡಿ. 6 ಬಾಬ್ರಿ ಮಸೀದಿ ನೆಲಸಮದ ವಾರ್ಷಿಕೋ­ತ್ಸ­ವ­ವಾಗಿದ್ದು   ಸಹಜವಾಗಿ ಸದನ ಕೋಲಾ­­ಹಲದಲ್ಲಿ ಮುಳುಗುವ ಸಾಧ್ಯತೆ­ಯಿದೆ.

ಭಾನುವಾರ ಹೊರಬರುವ 4 ರಾಜ್ಯ ಗಳ ವಿಧಾನಸಭೆ ಚುನಾವಣೆ ಫಲಿ ತಾಂಶ, ಸೋಮವಾರದ ಮಿಜೋ­ರಾಂ ಚುನಾವಣೆ ಫಲಿತಾಂಶ ಕಲಾಪದ ದಿಕ್ಕು ದೆಸೆ ತೀರ್ಮಾನಿಸಲಿದೆ ಎಂದು ರಾಜ್ಯ ಸಭೆ ಬಿಜೆಪಿ ಉಪ ನಾಯಕ ರವಿಶಂಕರ್‌ ಪ್ರಸಾದ್‌ ಪತ್ರಕರ್ತರಿಗೆ ತಿಳಿಸಿದರು. ಸಂಸತ್ತಿನ ಕಲಾಪವನ್ನು ವಿಸ್ತರಿಸ­ಬೇಕೆಂಬ ಬೇಡಿಕೆಯೂ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ಅವಲಂಬಿ­ಸಿದೆ.

ಬೆಲೆ ಏರಿಕೆ ಹಾಗೂ ತೆಲಂಗಾಣದ ಜತೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಪಟ್ನಾ ರ್‍್ಯಾಲಿಯಲ್ಲಿ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ಆಂತರಿಕ ಭದ್ರತೆ ಕುರಿತ ಚರ್ಚೆಗೆ ಬಿಜೆಪಿ ಪಟ್ಟು ಹಿಡಿಯಲಿದೆ. ಮುಜಫ್ಫರ್‌ನಗರದ ಕೋಮು ಗಲಭೆ ಕುರಿತ ಚರ್ಚೆಗೆ ಎಡ ಪಕ್ಷಗಳು ಆಗ್ರಹ­ಪಡಿಸುವ ಸಂಭವವಿದೆ.

ಮೋದಿ ಅವರ ‘ಕಣ್ಗಾವಲು ಹಗರಣ’­ವನ್ನು ಕಾಂಗ್ರೆಸ್‌ ಸದನದಲ್ಲಿ ಪ್ರಸ್ತಾಪಿ­ಸುವ ನಿರೀಕ್ಷೆ ಇದೆ. ಇದಕ್ಕೆ ಪ್ರತಿಯಾಗಿ ತೇಜ್‌ಪಾಲ್‌ ಹಗರಣ ಕೆದಕಿ ಬಿಜೆಪಿ ಆಡಳಿತ ಪಕ್ಷದ ಬಾಯಿ ಮುಚ್ಚಿಸುವ ಸಾಧ್ಯತೆ ಇದೆ.

ಪ್ರಮುಖ ಚರ್ಚೆ ವೇಳೆ ಮಾಧ್ಯಮ ಹೊರಗಿಡಿ
ಮಾಧ್ಯಮಗಳು ರಾಜಕೀಯ ಪಕ್ಷ­ಗಳನ್ನು ಒಡೆದು ಆಳುವ ಕೆಲಸ ಮಾಡುತ್ತಿದ್ದು, ಪ್ರಮುಖ ವಿಷಯಗಳ ಮೇಲೆ ಚರ್ಚೆ ನಡೆಯುವ ಸಮಯ­ದಲ್ಲಿ ಪ್ರಜಾಪ್ರಭುತ್ವದ ನಾಲ್ಕನೆಯ ಆಯಾಮವನ್ನು ಹೊರಗಿಡಬೇಕೆಂದು ಹಿರಿಯ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ರಾಜಕೀಯ ನಾಯಕರು ಪ್ರಮುಖ ನೀತಿಗಳ ಮೇಲೆ ಚರ್ಚೆ ಮಾಡುವ ವೇಳೆಯಲ್ಲಿ ಮಾಧ್ಯಮಗಳನ್ನು ಹೊರ­ಗಿ­ಟ್ಟರೆ ಒಮ್ಮತ ಮೂಡಿಸಲು ಸಾಧ್ಯ­ವಾಗುತ್ತದೆ ಎಂದು ಕೇಂದ್ರ ಗ್ರಾಮೀ­ಣಾ­ಭಿವೃದ್ಧಿ ಸಚಿವ ಜೈರಾಂ ರಮೇಶ್‌ ಹಾಗೂ ಬಿಜೆಪಿ ಮಾಜಿ ಅಧ್ಯಕ್ಷ  ನಿತಿನ್‌ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮಗಳನ್ನು ಹೊರಗಿಟ್ಟಾಗ ಮಹತ್ವದ ವಿಷಯಗಳಲ್ಲಿ ಒಮ್ಮತ ಮೂಡಿಸಲು ಸಾಧ್ಯವಾಗಿದೆ. ಮಾಧ್ಯ­ಮ­­ಗಳಿಗೆ ರಾಜಕೀಯ ಪಕ್ಷಗಳ ಮಧ್ಯೆ ಒಮ್ಮತ ಮೂಡುವುದು ಬೇಡವಾ­ಗಿದೆ. ರಾಜಕೀಯ ನಾಯಕರು ಜಗಳ­ವಾಡದಿದ್ದರೆ ಅವರ ಟಿಆರ್‌ಪಿ ಕಡಿಮೆ ಆಗುತ್ತದೆ ಎಂದು ಇಬ್ಬರೂ ನಾಯಕ­ರು ಖಾಸಗಿ ಟಿವಿ ವಾಹಿನಿ­ಏರ್ಪಡಿ­ಸಿ­ರುವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT