ನವದೆಹಲಿ (ಪಿಟಿಐ): ದೆಹಲಿ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸಗಡ ರಾಜ್ಯ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಭಾನುವಾರ (ಡಿ. 8) ಹೊರಬೀಳಲಿದೆ. ಈಶಾನ್ಯದ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮಾತ್ರ ಸೋಮವಾರ (ಡಿ. 9) ನಡೆಯಲಿದೆ.
ಎಣಿಕೆ ಕಾರ್ಯ ಎಲ್ಲೆಡೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ವಿದ್ಯುನ್ಮಾನ ಮತಯಂತ್ರಗಳಿರುವ ಕಾರಣ ಮಧ್ಯಾಹ್ನದ ಒಳಗಾಗಿ ಬಹುತೇಕ ಫಲಿತಾಂಶ ದೊರೆಯುವ ಸೂಚನೆಗಳಿವೆ. ಮುಂಬರುವ ಲೋಕಸಭಾ ಚುನಾವಣೆಯ ‘ಉಪಾಂತ್ಯ ಪಂದ್ಯ’ ಎಂದೇ ಈ ಚುನಾವಣೆಯನ್ನು ಬಿಂಬಿಸಲಾಗುತ್ತಿದೆ. ದೆಹಲಿಯಲ್ಲಿ ಶೇ 61, ರಾಜಸ್ತಾನದಲ್ಲಿ ಶೇ 74, ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ತಲಾ ಶೇ 70, ಮಿಜೋರಾಂನಲ್ಲಿ ದಾಖಲೆಯ ಶೇ 81ರಷ್ಟು ಮತದಾನ ದಾಖಲಾಗಿತ್ತು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ತನ್ನ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ನಡೆದ ಈ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನ ಬಗ್ಗೆ ಕುತೂಹಲ ಕೆರಳಿದೆ. ಹೀಗಾಗಿ ಭಾನುವಾರದ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದೇ ರೀತಿ ಕಾಂಗ್ರೆಸ್ ಈ ಚುನಾವಣೆಯಲ್ಲಿ ತೋರುವ ಪ್ರದರ್ಶನವು ಆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸಾಮರ್ಥ್ಯವನ್ನೂ ಒರೆಗೆ ಹಚ್ಚಲಿದೆ.
ವಸುಂಧರಾ ರಾಜೆ (ರಾಜಸ್ತಾನ), ರಮಣಸಿಂಗ್ (ಛತ್ತೀಸಗಡ), ಶಿವರಾಜ ಸಿಂಗ್ (ಮಧ್ಯಪ್ರದೇಶ), ಹರ್ಷವರ್ಧನ್, ಶೀಲಾ ದೀಕ್ಷಿತ್ ಮತ್ತು ಅರವಿಂದ ಕೇಜ್ರಿವಾಲ್ (ದೆಹಲಿ) ಭವಿಷ್ಯ ನಿರ್ಧಾರವಾಗಲಿದೆ. ಬಹುತೇಕ ಮತಗಟ್ಟೆ ಸಮೀಪ ಸಮೀಕ್ಷೆಗಳು ಮಧ್ಯಪ್ರದೇಶ, ಛತ್ತೀಸಗಡಗಳಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ನಿಂದ ಅಧಿಕಾರ ಕಸಿದುಕೊಳ್ಳಲಿದೆ ಎಂದು ಅಂದಾಜಿಸಿವೆ. ದೆಹಲಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಬಹುದು ಎಂದು ಹೇಳಿವೆ.
ಲೋಕಸಭೆಯತ್ತ ಚಿತ್ತ
ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನಿರಾಶಾದಾಯಕ ಪ್ರದರ್ಶನದ ಮುನ್ಸೂಚನೆ ವಿವಿಧ ಮತಗಟ್ಟೆ ಸಮೀಕ್ಷೆಗಳು ನೀಡಿರುವಂತೆಯೇ ಕಾಂಗ್ರೆಸ್, ಈ ಫಲಿತಾಂಶದ ಬಗ್ಗೆ ತಲೆಕೆಡಿಸಕೊಳ್ಳದೆ ಮುಂಬರುವ ಲೋಕಸಭಾ ಚುನಾವಣೆಯತ್ತ ಚಿತ್ತ ಹರಿಸಲು ಬಯಸಿದೆ.
ಪ್ರಾಂತೀಯ ಚುನಾವಣಾ ಫಲಿತಾಂಶಗಳು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿರುವ ಪಕ್ಷವು, ಇದಕ್ಕೆ ಪೂರಕವಾಗಿ ಈ ಹಿಂದಿನ ಉದಾಹರಣೆಗಳನ್ನು ಉಲ್ಲೇಖಿಸಿದೆ.
‘ಚುನಾವಣೋತ್ತರ ಮತ್ತು ಮತಗಟ್ಟೆ ಸಮೀಕ್ಷೆಗಳು ನಿಜವಾದರೂ ಸಂಭ್ರಮಾಚರಣೆ ಮಾಡುವಾಗ ಬಿಜೆಪಿ ಎಚ್ಚರಿಕೆಯಿಂದ ಇರಬೇಕು. 1998, 1999ರಲ್ಲಿ ಈ ನಾಲ್ಕು ರಾಜ್ಯಗಳಲ್ಲಿ ನಾವೂ ಗೆದ್ದಿದ್ದೆವು. ಆದರೆ 1999ರ ಲೋಕಸಭಾ ಚುನಾವಣೆ ನಮ್ಮ ಕಣ್ಣು ತೆರೆಸಿತ್ತು’ ಎಂದು ಪಕ್ಷದ ದೆಹಲಿ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಕೀಲ್ ಅಹ್ಮದ್ ಹೇಳಿದ್ದಾರೆ.
‘1998, 1999ರಲ್ಲಿ ನಾವು ದೆಹಲಿ, ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಗಡ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದಿದ್ದರೂ, 1999ರ ಲೋಕಸಭಾ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತ್ತು’ ಎಂದು ನೆನಪಿಸಿದ್ದಾರೆ.
ದೆಹಲಿ ವಿಧಾಸಭೆಯ (70) ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮತ್ತು ಎಎಪಿ ಸ್ಪರ್ಧಿಸಿವೆ. ಬಿಜೆಪಿ 66 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 4 ಸ್ಥಾನಗಳನ್ನು ಮಿತ್ರಪಕ್ಷ ಎಸ್ಎಡಿಗೆ ಬಿಟ್ಟುಕೊಟ್ಟಿದೆ. ಒಟ್ಟಾರೆ ಇಲ್ಲಿ 810 ಸ್ಫರ್ಧಿಗಳು ಕಣದಲ್ಲಿದ್ದಾರೆ. ಮಧ್ಯಪ್ರದೇಶದ ಎಲ್ಲಾ (230) ಕ್ಷೇತ್ರಗಳಲ್ಲೂ ಬಿಜೆಪಿ ಸ್ಪರ್ಧಿಸಿದೆ. ಕಾಂಗ್ರೆಸ್ 229 ಕಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.
ಒಟ್ಟಾರೆ 2,583 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜಸ್ತಾನದ ಎಲ್ಲಾ (200) ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಒಟ್ಟಾರೆ 2,087 ಸ್ಪರ್ಧಿಗಳು ಕಣದಲ್ಲಿದ್ದಾರೆ. ಛತ್ತೀಸಗಡದ ಎಲ್ಲ ಕ್ಷೇತ್ರಗಳಲ್ಲೂ (90) ಕಾಂಗ್ರೆಸ್ ಮತ್ತು ಬಿಜೆಪಿ ಸ್ಪರ್ಧಿಸಿವೆ. ಒಟ್ಟಾರೆ 986 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.