ಸಿಂಧನೂರು: ಭಾರತ ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿ ಸಿಂಧನೂರಿಗೆ ಆಗಮಿಸುತ್ತಿರುವ ಸುದ್ದಿಯನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಳ್ಳಿ ಹಳ್ಳಿಗೆ ತಲುಪಿಸಿದ್ದು, ಈಗ ಎಲ್ಲರ ಬಾಯಲ್ಲೂ ಯುವರಾಜ ರಾಹುಲ್ಗಾಂಧಿಯದೇ ಮಾತು. ಹೊಟೇಲ್, ಅಗಸಿಕಟ್ಟೆ, ಛಾವಡಿಯಲ್ಲಿ ಗುಂಪು ಗುಂಪಾಗಿ ಕುಳಿತು ಮಾತನಾಡುತ್ತಿರುವುದು ಸಾಮಾನ್ಯವಾಗಿದೆ.
`ಮೂವ್ವತ್ತು ವರ್ಷದ ಹಿಂದೆ ಇಂದ್ರಮ್ಮ ಚಿನ್ನೂರಿಗೆ ಬಂದಿದ್ಲು. ನೋಡಿ ಬಂದಿದ್ವಿ. ಈಗ ಮೊಮ್ಮಗನ ಒಂದ್ಸಾರಿ ತೋರಿಸಕಂಡ ಬಂದಬುಡಪ. ಹೆಂಗ್ ಅದ್ಯಾನ ನೋಡ್ತೀನಿ' ಎಂದು ತಾಲ್ಲೂಕಿನ ಚಿರತ್ನಾಳ ಗ್ರಾಮದ ಹನುಮಮ್ಮ ಎನ್ನುವ ಅಜ್ಜಿ ಮೊಮ್ಮಗ ಮಾನಯ್ಯನಿಗೆ ಹೇಳಿದ ಮಾತಿದು.