ಇಂಫಾಲ(ಪಿಟಿಐ): ನಟಿಯ ಮಾನಭಂಗಕ್ಕೆ ಯತ್ನಿಸಿದ ನಾಗಾ ಉಗ್ರನ ಬಂಧನಕ್ಕೆ ಆಗ್ರಹಿಸಿ ನಡೆದ ಮುಷ್ಕರದ ವೇಳೆ ಪೊಲೀಸ್ ಗೋಲಿಬಾರ್ನಲ್ಲಿ ಪತ್ರಕರ್ತ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಭಾನುವಾರ ನಡೆದ ಬಂದ್ ಹಿಂಸಾಚಾರಕ್ಕೆ ತಿರುಗಿ, ಗೋಲಿಬಾರ್ಗೆ `ಪ್ರೈಮ್ ನ್ಯೂಸ್ ಪತ್ರಿಕೆಯ ಪತ್ರಕರ್ತ ನಾನೊವಾ ಸಿಂಗ್(29) ಬಲಿಯಾಗಿದ್ದರು.
ಪ್ರಕರಣದ ತನಿಖೆಗೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ನೇತೃತ್ವದ ತ್ರಿ ಸದಸ್ಯ ತನಿಖಾ ಸಮಿತಿ ನೇಮಲಿಸಲಾಗಿದ್ದು, ವಾರದೊಳಗೆ ಸಮಿತಿ ವರದಿ ಸಲ್ಲಿಸಲಿದೆ. ಮಣಿಪುರ ಪತ್ರಕರ್ತರ ನಿಯೋಗವು ಭಾನುವಾರ ಸಂಜೆ ಮುಖ್ಯಮಂತ್ರಿ ಇಬೊಯಿ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಭರವಸೆ ದೊರೆತಿದೆ ಎನ್ನಲಾಗಿದೆ.
ಕರ್ಫ್ಯೂ ಮುಂದುವರಿಕೆ: ಇಂಫಾಲ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ವಿಧಿಸಿದ್ದ 16 ಗಂಟೆಗಳ ಕರ್ಫ್ಯೂ ಅನಿರ್ದಿಷ್ಟಾವಧಿಗೆ ಮುಂದುವರಿಯಲಿದೆ.