ಪುಣೆ: ಕನ್ನಡ ಭಾಷೆ ಮರಾಠಿಯ ಹಿರಿಯಕ್ಕ. ಈ ಎರಡು ಭಾಷೆಗಳ ಐತಿಹಾಸಿಕ ಅನುಬಂಧ ಅನ್ಯೋನ್ಯ. ಇದನ್ನು ಬೆಳೆಸಬೇಕು. ವಿಶಾಲ ಮನೋಭಾವನೆ ಬೆಳೆಯಲು ಕನ್ನಡ ಹಾಗೂ ಇತರ ಭಾಷೆಯ ಕಲಿಕೆ ಅಗತ್ಯ ಎಂದು ಶಿಕ್ಷಣ ತಜ್ಞ , ಮರಾಠಿಯ ಹಿರಿಯ ಸಾಹಿತಿ ಡಾ. ನ.ಮ. ಜೋಶಿ ಅವರು ಹೇಳಿದರು.
ಅವರು ಇಲ್ಲಿ ಕೃ.ಶಿ. ಹೆಗಡೆ ಅವರು ಮರಾಠಿಗರ ಅಧ್ಯಯನಕ್ಕಾಗಿಯೇ ರಚಿಸಿದ ಇಲ್ಲಿನ ಗುರುಕುಲ ಪ್ರತಿಷ್ಠಾನದಿಂದ ಪ್ರಕಟವಾಗಿರುವ `ಸುಲಭ ಕನ್ನಡ~ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಈ ಸಾಲಿನ ಕನ್ನಡ ಕಲಿಕಾ ವರ್ಗ ಮತ್ತು ಪ್ರಗತ ಕನ್ನಡ ಕಲಿಕಾ ವರ್ಗಗಳನ್ನು ಉದ್ಘಾಟಿಸಿದರು. ಹಿಂದಿನ ಸಾಲಿನ ಕನ್ನಡ ಕಲಿಕಾ ವರ್ಗಗಳ ಪ್ರಮಾಣ ಪತ್ರ ಪ್ರದಾನ ಮಾಡಿದರು.
ಪ್ರತಿಕೂಲ ಸ್ಥಿತಿಯಲ್ಲಿ ದಶಕಗಳ ಕಾಲದಿಂದ ಕನ್ನಡ ವರ್ಗಗಳನ್ನು ಪುಣೆಯಂತಹ ನಗರದಲ್ಲಿ ನಡೆಸಿಕೊಂಡು ಬರುವುದು ಸುಲಭವಲ್ಲ. ಇದಕ್ಕೆ ಹಟಮಾರಿತನ, ಭಾಷಾ ಸಾಮರಸ್ಯದ ಅಭಿಮಾನ, ಸ್ಥಾನಿಕರ ಪ್ರೋತ್ಸಾಹ ಈ ರೀತಿ ಅನೇಕ ಕಾರಣಗಳಿವೆ ಎಂದು ಮರಾಠಿ- ಕನ್ನಡ ಸ್ನೇಹವರ್ಧನ ಕೇಂದ್ರದ ಅಧ್ಯಕ್ಷ ಡಾ. ಭಾ.ರ. ಸಾಬಡೆ ಹೇಳಿದರು.