ನವದೆಹಲಿ (ಐಎಎನ್ಎಸ್): ಕೋಲ್ಕತ್ತ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ `ಪ್ಲೇ ಆಫ್~ ಹಂತ ಪ್ರವೇಶಿಸಲು ಇನ್ನೂ ಬಲುದೂರ ಸಾಗಬೇಕಿದೆ ಎಂದು ತಂಡದ ನಾಯಕ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ನೈಟ್ ರೈಡರ್ಸ್ ಆರು ವಿಕೆಟ್ಗಳಿಂದ ಡೆಲ್ಲಿ ಡೇರ್ಡೆವಿಲ್ಸ್ ತಂಡವನ್ನು ಮಣಿಸಿತ್ತು. ಗಂಭೀರ್ ಬಳಗ 18.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿಗೆ ಅಗತ್ಯವಿದ್ದ 154 ರನ್ಗಳನ್ನು ಗಳಿಸಿತ್ತು. ಮಾತ್ರವಲ್ಲ 17 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.
`ಪ್ಲೇ ಆಫ್ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಮುಂದಿನ ಕೆಲವು ಪಂದ್ಯಗಳಲ್ಲಿ ಗೆಲುವು ಅನಿವಾರ್ಯ. ಆದ್ದರಿಂದ ಯಶಸ್ಸಿನ ಅಲೆಯಲ್ಲಿ ಮೈಮರೆಯುವುದು ಸರಿಯಲ್ಲ. ಸಂಘಟಿತ ಹೋರಾಟ ನೀಡುವುದು ಅಗತ್ಯ~ ಎಂದು ಗಂಭೀರ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.
44 ಎಸೆತಗಳಲ್ಲಿ 56 ರನ್ ಗಳಿಸಿದ ಬ್ರೆಂಡನ್ ಮೆಕ್ಲಮ್ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಂಭೀರ್, `ಮೆಕ್ಲಮ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಇದು ತಂಡದ ಯಶಸ್ಸಿಗೆ ಅಗತ್ಯ. ಕಳೆದ ಪಂದ್ಯದಲ್ಲೂ ಅವರು ಉತ್ತಮ ಪ್ರದರ್ಶನ ನೀಡಿದ್ದರು~ ಎಂದಿದ್ದಾರೆ.
ತಂಡವನ್ನು `ಪ್ಲೇ ಆಫ್~ಗೆ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ನನ್ನ ಹಾಗೂ ಜಾಕ್ ಕಾಲಿಸ್ ಮೇಲಿದೆ ಎಂದು ಈ ಎಡಗೈ ಬ್ಯಾಟ್ಸ್ಮನ್ ನುಡಿದಿದ್ದಾರೆ.